Thursday 10 January 2019

ದೇವತಾರಾಧನೆ ಎಂದರೆ ಏನು?

ದೇವತಾರಾಧನೆ ಎಂದರೆ ಏನು? *ಮಂಗಲ ಕಾರ್ಯ, ಹೊಸ, ವ್ಯಾಪಾರ ಇತ್ಯಾದಿ ಮಾಡುವ ಮುನ್ನ ಜಾತಕ ಪರಿಶೀಲಿಸಬೇಕೆ? ಏಕೆ?-ಅಚ್ಚುತ್ ರಾವ್, ಬೆಂಗಳೂರು ಉತ್ತರ: ಸುಮಂಗಲ ಫಲಾಧಿಪ ಗುರುವನ್ನೂ, ವ್ಯವಹಾರಾಧಿಪ ಬುಧನನ್ನೂ ಸ್ಥಿತಿಗಳನ್ನು ಪರಿಶೀಲಿಸಿಯೇ ಇಂಥ ಕಾರ್ಯಗಳನ್ನು ಮಾಡಬೇಕು. ಶರೀರ ಸ್ವಾಥ್ಯ ಕೆಟ್ಟಾಗ ವೈದ್ಯರನ್ನು ನೋಡುವುದಕ್ಕಿಂತ, ಆರೋಗ್ಯವಾಗಿರುವಾಗಲೇ ಸೂಕ್ತ ಆಹಾರ, ವ್ಯಾಯಾಮಗಳ ಆಶ್ರಯಿಸುವುದು ಒಳ್ಳೆಯದಲ್ಲವೇ...! *ಯೋಗ್ಯ ಜ್ಯೋತಿಷಿಗಳನ್ನು ಗುರುತಿಸುವ ಬಗೆ ಹೇಗೆ?-ಆದಿಕೇಶವಲು, ಬೆಂಗಳೂರು ಉತ್ತರ:ನಾವು ಯೋಗ್ಯ ಜೀವನ ನಡೆಸುತ್ತ, ಗುರು ಹಿರಿಯರನ್ನೂ, ಉತ್ತಮ ಪುಸ್ತಕಗಳನ್ನು ಓದಿಕೊಂಡು ವಿವೇಕಗಳಿಸಿದ್ದರೆ, ನಮಗೆ ದೊರೆವ ಜ್ಯೋತಿಷಿಯೂ ಯೋಗ್ಯರೇ ಆಗಿರುತ್ತಾರೆ. ತಂತಿಯೇ ತುಕ್ಕು ಹಿಡಿದರೆ, ಹೊರಡುವ ರಾಗ ಅಪಶ್ರುತಿಯೇ ಆಗಿರುತ್ತದೆ. *ಜ್ಯೋತಿಷ್ಯದ ಪ್ರಕಾರ ದೇವತಾರಾಧನೆ ಎಂದರೆ ಏನು, ಹೇಗೆ?ಸುಮಿತ್ರಾ, ಚಿಕ್ಕಮಗಳೂರು ಉ:ಕುಲ ದೈವ, ಗುರು ಮತ್ತು ಇಷ್ಟ ದೈವ ಎಂದು ಮೂರು ಬಗೆ. ಹಲವರಿಗೆ ಇದರಲ್ಲಿ ಸೌಮ್ಯಭಾವ ಇರದು. ಹೀಗಾಗಿ ಅವ್ಯವಸ್ಥಿತ ಜೀವನ ಸಾಗಿಸುತ್ತಿರುತ್ತಾರೆ. ಈ ವ್ಯತ್ಯಾಸ ಏನಾಗಿದೆ ಎಂದು ಜ್ಯೋತಿಷ್ಯಶಾಸ್ತ್ರದಿಂದ ಮಾತ್ರ ತಿಳಿಯಬಹುದಾಗಿದೆ. ಅನ್ಯ ಉಪಾಯ ಪ್ರಯೋಜನಕ್ಕೆ ಬಾರದು. *ಮುಹೂರ್ತಕ್ಕೂ, ಲಗ್ನಕ್ಕೂ ಇರುವ ವ್ಯತ್ಯಾಸ ಏನು?ಕಲ್ಯಾಣ ಶರ್ಮ, ಮೈಸೂರು ಉ:ನೀವು ಮನೆಯಿಂದ ಹೊರಡುವ ವೇಳೆಗೂ, ನೀವು ಹಿಡಿಯಬೇಕಾದ ಬಸ್ಸಿನ ಟೈಮಿಗೂ ಇರುವ ಸಂಬಂಧವೇ ಮುಹೂರ್ತಕ್ಕೂ, ಲಗ್ನಕ್ಕೂ ಇರುವುದು. ಅಂದಿನ ದಿನ ಗುರು ಮತ್ತು ಚಂದ್ರರ ಶುಭ ಸ್ಥಿತಿ ಮುಹೂರ್ತವಾದರೆ ಅಲ್ಲಿನ ಲಗ್ನಭಾವ ಅನುಕೂಲ ನೋಡುವುದು. ಎರಡೂ ಒಂದೇ ನಾಣ್ಯದ ಎರಡು ಮುಖಗಳು. *ಜಾತಕದಲ್ಲೇ ಗುರು ಬಲವಿಲ್ಲದೇ ಶುಭವಾಗುವುದೇ?ಜಾನಕೀಪತಿ, ಹರಿಹರ ಉ:ಒಂದು ಜನ್ಮಾಂತರದಿಂದ ತಂದದ್ದು, ಅದು ಇಲ್ಲವಾದರೆ ಮತ್ತೊಂದು ಇಲ್ಲಿ ಆರ್ಜಿಸುವುದು. ಎರಡೂ ಒಳ್ಳೆಯದೇ. ಆದರೆ ಸೂಕ್ತ ಮಾರ್ಗದರ್ಶನ ಪಡೆದು ಮುನ್ನಡೆಯಬೇಕು. (ಜ್ಯೋತಿಷ್ಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳಿದ್ದಲ್ಲಿ ನಮಗೆ ಬರೆದು ಕಳಿಸಬಹುದು. ನಿಮ್ಮ ಪ್ರಶ್ನೆಗೆ ದೈವಜ್ಞ ಹರೀಶ್ ಕಾಶ್ಯಪ್ ಉತ್ತರಿಸುತ್ತಾರೆ. ನಮ್ಮ ವಿಳಾಸ ಸಂಪಾದಕರು, ಲವಲವಿಕೆ, ಜ್ಯೋತಿಷ್ಯ ವಿಭಾಗ, ನಂ.40, ಜಯ ಸಾಯಿ ಟವರ್ಸ್‌, ಸಜ್ಜನ್ ರಾವ್ ರಸ್ತೆ, ವಿವಿ ಪುರಂ, ಬೆಂಗಳೂರು-560 004. Email:lvk@vijaykarnataka.com. ದೂರವಾಣಿ:40877545)

No comments:

Post a Comment