Wednesday 3 July 2019

ಕನ್ನಡ ಜ್ಯೋತಿಷ್ಯ ಲೇಖನಗಳು ಡಾ : ಶೈಲಜಾ ರಮೇಶ್ Off pH no 7337786451

ಮನುಜನ ವಿವಿಧ ಮಾನಸಿಕ ವರ್ತನೆಗಳು *********************************** ಗ್ರಹಗಳ ಚಲನವಲನದಿಂದ ಮನುಜನ ಮೇಲೆ ಉಂಟಾಗುವ ವಿವಿಧ ಮಾನಸಿಕ ವರ್ತನೆಗಳು, ದೈಹಿಕವಾಗಿ ಯಾವ ರೀತಿಯ ಪರಿಣಾಮವನ್ನು ಬೀರುವುದು ಎಂಬ ಸೂಕ್ಷ್ಮ ವಿಚಾರವನ್ನು ಅವಲೋಕಿಸಿದಾಗ, ಮೊದಲು ಈ ಮಾನಸಿಕ ವರ್ತನೆಗೆ ಪ್ರಮುಖ ಕಾರಣ ಚಂದ್ರಗ್ರಹ ಎಂಬ ಅರಿವು ಮೂಡುತ್ತದೆ, ಚಂದ್ರ ಶೀಘ್ರ ಸಂಚಾರಿ, ಹಾಗೂ ಮನಸ್ಸಿನ ಕಾರಕನೂ ಆಗಿರುವುದರಿಂದ ಈ ಚಂದ್ರ ಗ್ರಹ ಇತರ ಗ್ರಹಗಳ ಜೊತೆ ಸೇರಿ ಉಂಟು ಮಾಡುವ ಮಾನಸಿಕ ಪರಿವರ್ತನೆ ಗಳನ್ನು ಗಮನಿಸೋಣ.... *ಚಂದ್ರನು ರವಿಯ ಜೊತೆಯಲ್ಲಿದ್ದರೆ* ಆ ವ್ಯಕ್ತಿಗೆ ಸಾಮಾಜಿಕ ಕಾರ್ಯಗಳಲ್ಲಿ ವಿಶೇಷ ಆಸ್ಥೆ, ಕೀರ್ತಿ ಗಳಿಸಬೇಕೆಂಬ ಅಭಿಲಾಷೆ ಇರುತ್ತದೆ. ರಜೋಗುಣ, ಗಂಭೀರವ್ಯಕ್ತಿ, ಠೀವಿ, ಸಮಾಜಕ್ಕೆ ಕೈಲಾದ ಸೇವೆ ಸಲ್ಲಿಸುವ ಮನಸ್ಸು ಇರುತ್ತದೆ. ರವಿ ಚಂದ್ರರ ಯುತಿ, ಸಮಸಪ್ತಕ, ರವಿಯಿಂದ ಚಂದ್ರನು ಕೇಂದ್ರದಲ್ಲಿದ್ದರೆ, ಜಾತಕರು ಹುಟ್ಟಿದಾಗಿನಿಂದ ಮಾತಾಪಿತರು ಕಷ್ಟಜೀವಿಗಳು, ದಂಪತಿಗಳಲ್ಲಿ ಭಿನ್ನಾಭಿಪ್ರಾಯ, ವೈಮನಸ್ಯ, ಅಸಮಾಧಾನ ತಲೆದೋರುವುದು. *ಚಂದ್ರನು ಬುಧನ ಜೊತೆಯಲ್ಲಿದ್ದರೆ,* ಆ ವ್ಯಕ್ತಿ ಬುದ್ಧಿವಂತ, ವಿವೇಚನೆ - ತಿಳುವಳಿಕೆಯಲ್ಲಿ ಬಲವುಳ್ಳವನು, ಪ್ರಕೃತಿ ಪ್ರೇಮಿ, ಸ0ಚಾರಪ್ರಿಯ, ಒಂದು ಕೆಲಸಕ್ಕೆ ಹಲವಾರು ಬಾರಿ ಓಡಾಡುವುದು, ಯಾವುದಾದರೂ ವಸ್ತುವನ್ನು ಕೊಳ್ಳಲು ಇತರರನ್ನು ಪ್ರೇರೇಪಿಸುವುದು, ತನ್ನ ಬುದ್ಧಿಮತ್ತೆಯ ಮೇಲಿಂದ ಇತರರನ್ನು ಆಕರ್ಷಿಸುವುದು, ಹಾಸ್ಯಯುಕ್ತ ಮಾತಿನ ಮೋಡಿಯಿಂದ ಇತರರನ್ನು ತನ್ನೆಡೆಗೆ ಸೆಳೆದು ತನ್ನ ಕಾರ್ಯ ಮಾಡಿಕೊಳ್ಳುವುದು. ತನ್ನ ಬುದ್ಧಿ ಪ್ರದರ್ಶನದಿಂದ ಲಾಭ ಮಾಡಿಕೊಳ್ಳುವುದು, ಆಗಾಗ ಜಿಪುಣರು, ದೊಡ್ಡಸ್ತಿಕೆಗೋಸ್ಕರ ಖರ್ಚು ಮಾಡುವರು. ಆದರೂ ಇವರು ಕೃಪಣರು, ಒಂದ್ತರಹ ವೈಶ್ಯ ಬುದ್ಧಿ, ಕಾಸಿಗೆ ಕಾಸು ಕೂಡಿಡುವುದು, ಕೂಡಿಟ್ಟ ಹಣವನ್ನು ಆಗಾಗ ನೋಡುತ್ತಿರುವುದು, ಇವರು ಸಾಧಾರಣವಾಗಿ ಯಾರನ್ನೂ ನಂಬುವುದಿಲ್ಲ. ಚಂದ್ರ, ಬುಧ ಎರಡೂ ವೈಶ್ಯಗ್ರಹ,ಹಾಗಾಗಿ ಜಾತಕರು ಜಿಪುಣರು, ಇವರಿಗೆ ಜಾನಪದ ಸಾಹಿತ್ಯ ಇಷ್ಟ ಆಗುತ್ತೆ. ಚಂದ್ರ ಬುಧರ ಯುತಿ, ಸಮಸಪ್ತಕವಿದ್ದರೆ ಈ ಯೋಗವಿರುತ್ತದೆ. ಬುದ ಅಸ್ತನಾಗಿರಬಾರದು, ಪೂರ್ಣ ಚಂದ್ರನಾದರೆ 100 ರಷ್ಟು ಫಲ, ಕ್ಷೀಣ ಚಂದ್ರನಾದರೆ 50 ರಷ್ಟು ಫಲ. ಚಂದ್ರ - ಬುಧನಿಂದ ಕೇಂದ್ರದಲ್ಲಿದ್ದರೆ ಅಲ್ಪ ಫಲ. ಕ್ಷೇತ್ರ ಪರಿವರ್ತನೆ ಯಾದರೆ 75 ಫಲ. ವಿದ್ಯಾಭ್ಯಾಸ ವಿದ್ಯಾರ್ಜನೆಗೆ ಲಗ್ನದಿಂದ ಚತುರ್ಥ ಸ್ಥಾನವನ್ನೂ, ಜ್ಞಾನಾರ್ಜನೆಗೆ ಪಂಚಮ ಸ್ಥಾನವನ್ನೂ ಪರಿಶೀಲಿಸಬೇಕು. ಆದ್ರೆ ಯಾವುದೇ ವಿದ್ಯೆಗೆ ಪ್ರಾಥಮಿಕ ವಿದ್ಯಾರ್ಜನೆಗೆ 2ನೇ ಮನೆಯನ್ನು ನೋಡಬೇಕು. ಏಕೆಂದರೆ ವಾಕ್ ಸ್ಥಾನವಾದ ಧನಸ್ಥಾನವು ಮಗುವಿನ ತೊದಲ್ನುಡಿಗಳಿಂದಿಡಿದು ಹೇಳಿಕೊಟ್ಟದ್ದನ್ನು ಕಲಿತು ಮತ್ತೆ ನೆನಪಿಸಿಕೊಂಡು ಹೇಳುವುದನ್ನು ಸೂಚಿಸುತ್ತೆ. ಎಲ್ಲಾ ವಿದ್ಯೆಗೂ ಮೂಲ ಸ್ಥಾನ ಧನಭಾವ ( 2ನೇ ಮನೆ ) ವೇ ಆಗಿದೆ. ಅಕ್ಷರದ ಪರಿಚಯವಿಲ್ಲದೆ ವಿದ್ಯಾವಂತನಾಗಲು ಸಾಧ್ಯವಿಲ್ಲ. ಧನಭಾವ ಚನ್ನಾಗಿದ್ದರೆ ಅಕ್ಷರಜ್ಞಾನ ಹೊಂದಿ ಪ್ರಾಥಮಿಕ ಶಿಕ್ಷಣವನ್ನು ಗಳಿಸಿರುತ್ತಾನೆ. ಧನಭಾವ ಬಲವಿಲ್ಲದೆ 5, 9 ನೇ ಸ್ಥಾನಗಳು ಪ್ರಭಲವಾಗಿದ್ದರೂ ವಿದ್ಯಾವಂತರಾಗಲಾರರು, ಧನಭಾವ ಪ್ರಬಲವಾಗಿದ್ದು 5, 9th ಬಲಹೀನವಾಗಿದ್ರೆ ಪೂರ್ಣಪ್ರಮಾಣದಲ್ಲಿ ವಿದ್ಯಾವಂತನಾಗದಿದ್ದರೂ, ಅಕ್ಷರಸ್ಥರಾಗಿ ವ್ಯಾವಹಾರಿಕ ಜ್ಞಾನವನ್ನು ಪಡೆಯಬಹುದು. ಹಾಗಾಗಿ ಜಾತಕದಲ್ಲಿ ವಿದ್ಯಾಭ್ಯಾಸವನ್ನು ಪರಿಶೀಲಿಸಬೇಕಾದರೆ... ಮೊದಲು 2, 5 ನೇ ಭಾವಗಳನ್ನು, ಅದರ ಭಾವಾಧಿಪತಿಗಳನ್ನ, ಮತ್ತವುಗಳ ಬಲಾಬಲಗಳನ್ನು ತಿಳಿಯಬೇಕಾಗುತ್ತದೆ. ■ ಬುಧ, ಗುರು, ಶುಕ್ರರು ವಿದ್ಯಾಕಾರಕರು. ■ ಬುಧ ---- ವಿದ್ಯಾಗ್ರಹಣ ಶಕ್ತಿ ■ ಗುರು ---- ಜ್ಞಾನಾರ್ಜನಾ ಶಕ್ತಿ ■ ಶುಕ್ರ ---- ಮೇಧಾ ಶಕ್ತಿ. ಜಾತಕದಲ್ಲಿ ಈ ವಿದ್ಯಾಸಂಬಂಧ ಗ್ರಹಗಳಾದ ಬುಧ , ಗುರು, ಶುಕ್ರರು ಪೀಡಿತರಾದಾಗ ವಿದ್ಯಾರ್ಜನಗೆ ಅಡಚಣೆ, ತೊಂದರೆಗಳಾಗುತ್ತವೆ. ★ ಧನ,(೨) ಚತುರ್ಥ(೪), ಪಂಚಮಭಾವಗಳು(೫) --- ವಿದ್ಯಾಭಾವಗಳು. ★ ಧನಭಾವ ---- ಗ್ರಹಣಶಕ್ತಿ, ಬರವಣಿಗೆ. ★ ಚತುರ್ಥ ಭಾವ ---- ಮನಸ್ಸಿಟ್ಟು ಕಲಿಕೆ, ಮಧ್ಯಮ ಹಾಗೂ ಉನ್ನತ ಶಿಕ್ಷಣ ★ ಪಂಚಮಭಾವ ---- ಬುದ್ಧಿಶಕ್ತಿ, ಜ್ಞಾನ ಸಂಪಾದನಾ ದಾಹ. ★ ನವಮಭಾವ --- ಉನ್ನತವಿದ್ಯೆ. ★ ದಶಮ ಭಾವ ---- ವಿದ್ಯಾವರ್ಗ ( ಶ್ರೇಣಿ). ***************************** ವಿದ್ಯೆಗೆ ತೊಂದರೆ ಮಾಡುವ ಗ್ರಹಗಳು ★ ಕುಜ, ರವಿ, ಶನಿ, ರಾಹು, ಕೇತು ಮತ್ತು ಬಲಹೀನ ಶುಕ್ರ, ಪೀಡಿತ ಬುಧ. ★ ಕುಜ -- ಮರೆವು ★ ರವಿ -- ವಿದ್ಯಾಕಾಲದಲ್ಲಿ ದೈಹಿಕ ತೊಂದರೆ ★ ಶುಕ್ರ ಹಾಗೂ ಪೀಡಿತ ಬುಧ -- ಬುದ್ಧಿ ಮಾಂದ್ಯತೆ, ಅಲ್ಪಗ್ರಹಣಶಕ್ತಿ. ★ ಶನಿ -- ಸೋಮಾರಿತನ, ನಿಧಾನ, ಗಮನ ನೀಡದೆ ಇರುವುದು. ★ ರಾಹು - ಕೇತುಗಳು -- ವಿಷಯದಲ್ಲಿ ಅಲ್ಪಜ್ಞಾನ ವಿದ್ಯೆ ಪರಿಶೀಲನೆಗೆ ನಿಯಮಗಳು ***************************** ◆ 2, 5 ನೇ ಅಧಿಪತಿಗಳು ವಕ್ರೀ, ಅಸ್ತ, ನೀಚ, ಪಾಪಕರ್ತರಿ, ಪಾಪಗ್ರಹ ಯುತಿ, ದೃಷ್ಟಿ, ಹಾಗೂ ದುಸ್ಥಾನ ಗಳಲ್ಲಿ ಸ್ಥಿತರಾದಲ್ಲಿ ವಿದ್ಯಾದೋಷ. ◆ ವಿದ್ಯಾಕಾರಕ ಬುಧ, ಗುರುಗಳು ದುಸ್ಥಾನ ಸ್ಥಿತ, ಬಲಹೀನ, ಪಾಪಗ್ರಹಗಳಿಂದ ಪೀಡಿತರಾದಾಗ ವಿದ್ಯೆಯಲ್ಲಿ ಕುಂಠಿತ ( ಬುಧ - ಗ್ರಹಣಶಕ್ತಿ, ಗುರು - ಶ್ರದ್ಧೆ ). ,◆ ವಿದ್ಯಾಸ್ಥಾನದಲ್ಲಿ ರಾಹುಕೇತುಗಳು ಸ್ಥಿತರಾಗಿ ಪಾಪಗ್ರಹಗಳ ಸಂಬಂಧ ಬಂದಾಗ ವಿದ್ಯಾಹೀನ. ◆ ಕೇಂದ್ರಾದಿಪತ್ಯ ದೋಷ, ದುಸ್ಥಾನಾಧಿಪತ್ಯ, ವಕ್ರ, ನೀಚ, ಅಸ್ತ, ರಾಶಿ - ಭಾವ ಸಂಧಿಸ್ಥಿತ ನೈಸರ್ಗಿಕ ಶುಭಗ್ರಹಗಳಾದರೂ ವಿದ್ಯೆಗೆ ಅಡಚಣೆ. ◆ ನೈಸರ್ಗಿಕ ಪಾಪಗ್ರಹನಾದರೂ ಯೋಗಕಾರಕನು ವಿದ್ಯಾಸ್ಥಾನದಲ್ಲಿದ್ದಾಗ ವಿದ್ಯಾಭಿವೃದ್ಧಿ. ಪ್ರಸವ ಮತ್ತು ಆರೋಗ್ಯ ******************** ನಭೋಮಂಡಲದಲ್ಲಿ ಸಂಚರಿಸುತ್ತಿರುವ ಗ್ರಹಗಳ ಶಕ್ತಿಯು ಭೂಮಿಯನ್ನು ಸ್ಪರ್ಶಿಸಿ, ಜೀವಿಗಳ ಜೀವನದಲ್ಲಿ ವ್ಯತ್ಯಾಸವನ್ನು ತರುತ್ತದೆ. ಈ ಗ್ರಹಗಳು ಜನ್ಮಸ್ಥಳದ ಅಕ್ಷಾಂಶ ರೇಖಾಂಶ ಗಳಿಗೆ ತಕ್ಕಂತೆ ಉದಯವಾಗುವ ಲಗ್ನ ಬಿಂದುವಿಗೆ ಯಾವ ಭಾವದಲ್ಲಿ ಸ್ಥಿತರಾಗಿರುತ್ತಾರೋ ಅದರಂತೆ ಶುಭಾಶುಭ ಫಲಗಳನ್ನು ಕೊಡುತ್ತಾರೆ. ಈ ಗ್ರಹಗಳು ಭಚಕ್ರದ ಯಾವ ಯಾವ ರಾಶಿಯಲ್ಲಿ, ಯಾವ ನಕ್ಷತ್ರ ದಲ್ಲಿ, ಸ್ಥಿತರಾಗಿರುತ್ತಾರೋ ಅದರಂತೆ ಫಲಗಳಲ್ಲಿ ವ್ಯತ್ಯಾಸವುಂಟಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪೂರ್ವಜನ್ಮ ಕೃತ ಫಲದಂತೆ ಈ ಜನ್ಮವನ್ನು ಪಡೆಯುತ್ತಾರೆ, ಪೂರ್ವಜನ್ಮ ದಲ್ಲಿ ಮಾಡಿದ ಕರ್ಮಫಲವನ್ನು ಈ ಜನ್ಮದಲ್ಲಿ ಅನುಭವಿಸುವುದನ್ನು ಪ್ರಸವಕಾಲದ ಕುಂಡಲಿಯಲ್ಲಿ ನವಗ್ರಹರು ಸ್ಥಿತರಾದ ರೀತಿಯಲ್ಲಿ ತಿಳಿಯಬಹುದು. ಪೂರ್ವಜನ್ಮದ ಪಾಪ ಅಥವಾ ಪುಣ್ಯಫಲದಂತೆ ಮನುಷ್ಯಜನ್ಮ ಪಡೆದಮೇಲೆ ಅತ್ಯಂತ ದುಃಖ, ಸುಖ, ಕಷ್ಟಗಳನ್ನು ಅನುಭವಿಸುತ್ತೇವೆ. ಅದರೆ ಕೆಲವುವೇಳೆ ಜನ್ಮ ತಾಳುವುದಕ್ಕೆ ಅನೇಕ ಕಷ್ಟಗಳನ್ನು ಅನುಭವಿಸುವುದು ಮಾತೃ ಗರ್ಭದಿಂದಲೇ ಪ್ರಾರಂಭವಾಗುತ್ತದೆ. ಪ್ರಸವ ಕಾಲದಲ್ಲಿ ಬದುಕುಳಿದರೆ ಅದು ನಮ್ಮ ಜನ್ಮ, ಜನ್ಮಕೊಟ್ಟ ತಾಯಿ ಬದುಕುಳಿದರೆ ಅದು ಅವರ ಪುನರ್ಜನ್ಮ. ಗರ್ಭಧಾರಣೆಯ ನಂತರ ಗರ್ಭಸ್ರಾವ, ಗರ್ಭದಲ್ಲೇ ಮರಣ (ಮೃತ ಶಿಶು ಜನನ) ಅವಧಿಗೆ ಮೊದಲೇ ಜನನ, ಕಷ್ಟಪ್ರಸವ ಇವು ಜನನ ಪೂರ್ವ ಸಂಕಟಗಳು. ಗುರು, ಶುಕ್ರ, ಚಂದ್ರ, ಬುಧರು ಸುಖ (ಶುಭ) ಪ್ರಸವವನ್ನು ಸೂಚಿಸುತ್ತಾರೆ. ರವಿ, ಶನಿ, ಕುಜ, ರಾಹು ಕೇತುಗಳು ಕಷ್ಟ ( ಅಶುಭ ) ಪ್ರಸವವನ್ನು ಸೂಚಿಸುತ್ತಾರೆ. ರಕ್ತ ಅಥವಾ ಜಲಸ್ರಾವ, ಶಸ್ತ್ರ ಚಿಕಿತ್ಸೆಯ ಮೂಲಕ ಪ್ರಸವವನ್ನು ಕುಜನಿಂದಲೂ, ತಡೆಗಳನ್ನು ಶನಿಯಿಂದಲೂ, ರಕ್ತಸ್ರಾವವನ್ನು ರಾಹುವಿನಿಂದಲೂ ತಿಳಿಯಬಹುದು. ಯಾವುದೇ ಜಾತಕದಲ್ಲಿ ಮುಖ್ಯವಾಗಿ ಕುಜ, ಶನಿಯಿಂದ ನಂತರ ರವಿ ಕೇತುಗಳಿಂದ ಕಷ್ಟಪ್ರಸವವನ್ನು ನಿರ್ಣಯಿಸಬಹುದು. ಯಾವುದೇ ಜಾತಕದಲ್ಲಿ ರವಿ ಚಂದ್ರರು, ಲಗ್ನ, ಲಗ್ನಾಧಿಪತಿ, ಷಷ್ಟ, ಷಷ್ಟಾಧಿಪತಿ, ಅಷ್ಟಮ, ಅಷ್ಠಮಾಧಿಪತಿ, ಪೀಡಿತ - ಪಾಪಕರ್ತರಿಯೋಗ - ನೀಚ - ಅಸ್ತ - ಪಾಪಗ್ರಹಗಳ ಯುತಿ - ದೃಷ್ಟಿಯಿದ್ದರೆ ಆರೋಗ್ಯ ಕೆಡುತ್ತದೆ. ಈ ಭಾವ - ಭಾವಾಧಿಪತಿ ಗಳು ಬಲವಾಗಿದ್ದು, ಸುಸ್ಥಿಯಲ್ಲಿದ್ದರೆ ಜಾತಕರು ಆರೋಗ್ಯವಾಗಿರುತ್ತಾರೆ. ಪುರುಷರ ಆರೋಗ್ಯವನ್ನು ರವಿಯಿಂದಲೂ, ಸ್ತ್ರೀಯರ ಆರೋಗ್ಯವನ್ನು ಚಂದ್ರನಿಂದಲೂ ಅವರುಗಳ ಬಲಾಬಲದಿಂದ ತಿಳಿಯಬಹುದು. ಜಾತಕದಲ್ಲಿ ರವಿ ಪೀಡಿತನಾದ್ರೆ ಪ್ರಕೃತಿದತ್ತವಾದ ರೋಗಗಳು, ಚಂದ್ರನು ಪೀಡಿತನಾಗಿದ್ದರೆ, ಬಲಹೀನನಾಗಿದ್ದರೆ ಮಾನಸಿಕ ರೋಗಿಯಾಗುತ್ತಾರೆ. ಲಗ್ನ - ಲಗ್ನಾಧಿಪತಿ ಪೀಡಿತನಾಗಿದ್ದರೆ ಸದಾ ರೋಗಿಯಾಗಿದ್ದು ಸಣ್ಣಪುಟ್ಟ ರೋಗಗಳು ಕಾಡುತ್ತಿರುತ್ತವೆ. ಷಷ್ಟ - ಷಷ್ಟಾಧಿಪತಿ ಗಳು ಪೀಡಿತರಾಗಿದ್ದರೆ, ಅತೀವ ಬಾಧೆಯ ರೋಗಗಳು ಮೇಲಿಂದ ಮೇಲೆ ಬರುತ್ತಿರುತ್ತದೆ. ಅಷ್ಟಮ - ಅಷ್ಟಮಾಧಿಪತಿಗಳು ಪೀಡಿತರಾಗಿದ್ರೆ ತೀವ್ರ ಮರಣ ಸೂಚಕ ರೋಗಗಳು - ಸಾಂಕ್ರಾಮಿಕ ರೋಗಗಳು, ಭಯಂಕರ ವ್ಯಾಧಿಗಳು, ದುರ್ಮರಣಗಳು ಉಂಟಾಗುತ್ತದೆ. ದ್ವಾದಶ - ದ್ವಾದಶಾಧಿಪತಿಗಳು ಪೀಡಿತರಾದ್ರೆ ಸದಾ ಆಸ್ಪತ್ರೆ ವಾಸ, ಹಾಸಿಗೆ ಹಿಡಿಯುವ ವ್ಯಾಧಿಗಳು ಬರುತ್ತವೆ. ಹೋರಾ ಕುಂಡಲಿಯಲ್ಲಿ ಧನಯೋಗ ****************************** 30° ಯ ರಾಶಿಯನ್ನು ಸಮಭಾಗ ಮಾಡಿದಾಗ ಪ್ರತಿ ಭಾಗ ಒಂದೊಂದು ಹೋರೆಯಾಗುತ್ತದೆ. ಅಂದರೆ ಒಂದು ರಾಶಿಯಲ್ಲಿ ಎರಡು ಹೋರೆಗಳು. ಸಮರಾಶಿಯಲ್ಲಿ ಮೊದಲ 15° ಯ ವರೆಗಿನದ್ಧು ಚಂದ್ರಹೋರೆ, ನಂತರದ 15° (15° -30°) ವರೆಗೆ ರವಿಹೋರೆ. ಬೆಸರಾಶಿಗಳಲ್ಲಿ ಮೊದಲ 15° ಯವರೆಗೆ ರವಿ ಹೋರೆ, ನಂತರದ 15° (15° -30°) ವರೆಗೆ ಚಂದ್ರ ಹೋರೆ. ಚಂದ್ರ ಹೋರೆಯಲ್ಲಿ ಜಾಸ್ತಿ ಗ್ರಹಗಳಿದ್ದರೆ, ಕಡಿಮೆ ಪ್ರಯತ್ನ ಕ್ಕೇ ಹೆಚ್ಚು ಸಂಪಾದನೆ. ರವಿ ಹೋರೆಯಲ್ಲಿ ಜಾಸ್ತಿ ಗ್ರಹಗಳಿದ್ದರೆ ಪ್ರಯತ್ನಕ್ಕೆ ತಕ್ಕಂತೆ ಫಲ. ಒಳ್ಳೇ ಗ್ರಹಗಳಿದ್ದರೆ ಒಳ್ಳೇ ದಾರಿಯಲ್ಲಿ ಸಂಪಾದನೆ. ಇದು ಮೇಲ್ನೋಟಕ್ಕೆ ಕಾಣುವ ವಿಚಾರ, ಆಳ ಅಧ್ಯಯನದ ಮೂಲಕ ಯಾವ ಪ್ರಮಾಣದಲ್ಲಿ ಧನ ಸಂಪಾದನೆ ಅಥವಾ ಧನಲಾಭ ಅನ್ನುವ ವಿಚಾರವನ್ಮು ತಿಳಿಯಬಹುದು.. ಅವುಗಳೆಂದರೆ.... ★ ಪುರುಷ ರಾಶಿಯಲ್ಲಿನ ಪುರುಷ ಗ್ರಹಗಳು ರವಿ ಹೋರೆಯಲ್ಲಿದ್ದರೆ.... ★ ಸ್ತ್ರೀ ರಾಶಿಯಲ್ಲಿನ ಸ್ರೀಗ್ರಹಗಳು ಚಂದ್ರಹೋರೆಯಲ್ಲಿದ್ದರೆ 100% ಶುಭಫಲ ( ಅನಾಯಾಸ ಧನಲಾಭ ). ★ ಸ್ತ್ರೀ ರಾಶಿಯಲ್ಲಿನ ಪುರುಷ ಗ್ರಹಗಳು ರವಿ ಹೋರೆಯಲ್ಲಿದ್ದರೆ... ★ ಪುರುಷ ರಾಶಿಯಲ್ಲಿನ ಸ್ತ್ರೀ ಗ್ರಹಗಳು ಚಂದ್ರ ಹೋರೆ ಯಲ್ಲಿದ್ದರೆ..75% ಫಲ ( ಕಡಿಮೆ ಪರಿಶ್ರಮದಿಂದ ಅಧಿಕ ಧನಲಾಭ ). ★ ಪುರುಷ ರಾಶಿಯಲ್ಲಿನ ಪುರುಷ ಗ್ರಹ ಚಂದ್ರ ಹೋರೆ ಯಲ್ಲಿದ್ದರೆ... ★ ಸ್ತ್ರೀ ರಾಶಿಯಲ್ಲಿನ ಸ್ತ್ರೀ ಗ್ರಹ ರವಿ ಹೋರೆ ಯಲ್ಲಿದ್ದರೆ.. 50% ಫಲ ( ಶ್ರಮಕ್ಕೆ ತಕ್ಕಂತೆ ಧನಲಾಭ ). ★ ಸ್ತ್ರೀ ರಾಶಿಯಲ್ಲಿನ ಪುರುಷ ಗ್ರಹಗಳು ರವಿ ಹೋರೆಯಲ್ಲಿದ್ದರೆ ... ★ ಪುರುಶ ರಾಶಿಯಲ್ಲಿನ ಸ್ತ್ರೀ ಗ್ರಹಗಳು ಚಂದ್ರ ಹೋರೆ ಯಲ್ಲಿದ್ದರೆ..25% ಫಲ ( ಅಧಿಕ ಶ್ರಮ ಅಲ್ಪಲಾಭ ). ಜಾತಕದಲ್ಲಿ ಈ ರೀತಿಯ ಗ್ರಹ ಸಂಯೋಜನೆ ಯಿಂದ ನಮ್ಮ ಧನ ಸಂಪಾದನೆಯನ್ನು ನಿರ್ಧರಿಸಬಹುದು. ಧನಯೋಗ *********** ಮೊದಲನೆಯದಾಗಿ... 1) ಭಾವ 2) ಭಾವಾಧಿಪತಿ 3) ಭಾವಾಧಿಪತಿ ಸ್ಥಿತ ಸ್ಥಾನ 4) ಭಾವಾಧಿಪತಿಯನ್ನು ದೃಷ್ಟಿಸುವ ಗ್ರಹ 5) ಯುತಿ 6) ಧನಕಾರಕ 7) ಧನಯೋಗ... ಇವಿಷ್ಟನ್ನೂ ಪರಿಶೀಲಿಸಬೇಕಾಗುತ್ತದೆ. 2ನೇ ಭಾವಕ್ಕೆ ಅತೀ ಹೆಚ್ಚಿನ ಪ್ರಾಮುಖ್ಯತೆ .. ಏಕೆಂದರೆ 80% ರಿಸಲ್ಟ್ ಬಾವದಿಂದ ಸಿಗುತ್ತೆ. ನಂತರ ಧನಕಾರಕ(ಗುರು) ವನ್ನು ನೋಡಬೇಕು, ಗುರು ಉತ್ತಮ ಸ್ಥಾನದಲ್ಲಿ ಸ್ಥಿತನಾಗಿದ್ರೆ ಒಳ್ಳೆಯ ಫಲ... ಇಲ್ಲದಿದ್ದರೆ ಫಲದಲ್ಲಿ ವ್ಯತ್ಯಾಸ. ನಂತರ ಧನಭಾವ ಯಾವ ಸ್ವಭಾವ ಅನ್ನೋದನ್ನ ತಿಳಿಬೇಕು. ಧನಭಾವ ಚರರಾಶಿಯಾದರೆ.. ಒಮ್ಮೆಗೇ ಧಿಡೀರ್ ಹಣದ ಹರಿವು, ಉತ್ತಮ ಸಂಪಾದನೆ. ಧನಭಾವ ಸ್ಥಿರರಾಶಿಯದರೆ..ಜೀವನ ಪೂರ್ತಿ ನಿಶ್ಚಿತ ಹಣದ ಹರಿವು . ದ್ವಿಸ್ವಭಾವ ರಾಶಿಯಾದರೆ.. ಧನದ ಹರಿವಿನಲ್ಲಿ ಏರಿಳಿತವಿರುತ್ತದೆ. ನಂತರ ಧನಸ್ಥಾನ ಅಥವಾ ಧನಾಧಿಪತಿ ಇರುವ ದಿಕ್ಕು.. ತತ್ವ.. ಇವುಗಳ ಆಧಾರದ ಮೇಲೆ ಧನದ ಮೂಲ ಯಾವುದರಿಂದ ಅನ್ನುವುದನ್ನು ತಿಳಿಯಬಹುದು. 12 ಭಾವಗಳಿಂದಲೂ ಹಣದ ಹರಿವನ್ನು ತಿಳಿಯಬಹುದು. ಆದ್ರೆ 1, 2, 9, 10, 11 , 12 ನೇ ಭಾವಗಳು ಮುಖ್ಯ. ದಾರಿದ್ರ್ಯಭಾವ.. 3, 6, 8, 12. ಇಲ್ಲಿ ..ಧನ - ಹಾಗೂ ದಾರಿದ್ರ್ಯಭಾವಗಳೆರದರಲ್ಲೂ 12 ಮನೆಯನ್ನು ಪರಿಗಣಿಸಬೇಕು. 12ನೇ ಮನೆ ಧನಭಾವಗಳ ಜೊತೆ ಸಂಬಂಧ ಬಂದರೆ ಧನಭಾವ... 12ನೇ ಮನೆ ದರಿದ್ರಭಾವಗಳ ಜೊತೆ ಸಂಬಂಧ ಬಂದರೆ ದರಿದ್ರಭಾವ. ( 12 ನೇ ಭಾವ ದೂರಪ್ರಯಾಣ - ವಿದೇಶಿಪ್ರಯಾಣವನ್ನು ಸೂಚಿಸುತ್ತೇ) ನಕ್ಷತ್ರ ಗಳೂ... ಎಷ್ಟು ಪ್ರಮಾಣದಲ್ಲಿ ಧನಲಾಭವಾಗುತ್ತೆ ಅನ್ನುವುದನ್ನು ತಿಳಿಸುತ್ತೆ, ಯಾವರೀತಿಯ ಧನಾಗಮ... ಶೀಘ್ರ, ಲಘು, ಚರ, ಸ್ಥಿರ ಫಲಗಳು ..ಯಾವ ಸಮಯದಲ್ಲಿ ಅನ್ನುವುದನ್ನು ನಕ್ಷತ್ರ ಗಳಿಂದಲೂ ತಿಯಬಹುದು. ಧನಭಾವಾಧಿಪತಿಗಳು ಕೆಲವೊಮ್ಮೆ ಎರಡು ರೀತಿಯಲ್ಲಿ ವರ್ತಿಸುತ್ತೆ ಉತ್ಪತ್ತಿ ಇಲ್ಲ ಉತ್ಪತ್ತಿ ನಿಲ್ಲುತ್ತಿಲ್ಲ.. ಧನಭಾವಾಧಿಪತಿಗಳು ದಾರಿದ್ರ್ಯ ಭಾವದಲ್ಲಿದ್ದರೆ. ಅಥವಾ ದಾರಿದ್ರ್ಯಭಾವಾಧಿಪತಿಗಳು ಧನಭಾವದಲ್ಲಿದ್ದರೆ, ಹಣದ ಹರಿವು ಇರೋಲ್ಲ. ಧನಭಾವಾಧಿಪತಿಗಳ ಸಂಬಂಧ ಧನಭಾವದಲ್ಲೇ ಇದ್ದರೆ ಹಣದ ಉತ್ಪತ್ತಿ ಚೆನ್ನಾಗಿರುತ್ತೆ ಭಾಗ್ಯಾಧಿಪತಿ 12ನೇ ಭಾವಕ್ಕೆ ಹೋಗಬಹುದು. ಆದರೆ 3, 6, 8 ಕ್ಕೆ ಹೋಗಬಾರದು. ದುಸ್ಥಾನಾಧಿಪತಿಗಳು ದುಸ್ಥಾನದಲ್ಲೇ ಇದ್ದರೂ ಸಹ ಧನಲಾಭವಿರುತ್ತೆ( ವಿಪರೀತ ರಾಜಯೋಗ). ಧನದ ಅಭಾವ :-- ೧). ಜಾತಕದಲ್ಲಿ ಲಗ್ನಾಧಿಪತಿ ದ್ವಾದಶದಲ್ಲಿದ್ದು, ದ್ವಾದಶಾಧಿಪತಿ ಲಗ್ನದಲ್ಲಿದ್ದರೆ... 2). ಧನಾಧಿಪತಿ ವ್ಯಯದಲ್ಲಿದ್ದು, ದ್ವಾದಶಾಧಿಪತಿ ಧನಭಾವದಲ್ಲಿದ್ದರೆ... 3). ದುರ್ಬಲ ನಾದ ದ್ವಿತೀಯಾಧಿಪತಿ ಪಾಪಮಧ್ಯದಲ್ಲಿದ್ದರೆ... 3). ದ್ವಿತೀಯ ಹಾಗೂ ಲಾಭಾಧಿಪತಿಗಳು, ಷಷ್ಟ , ಅಷ್ಟಮದಲ್ಲಿದ್ದರೆ... 4). ಲಗ್ನಾಧಿಪತಿ ವ್ಯಯಭಾವದಲ್ಲಿದ್ದು ಮಾರಕಾಧಿಪತಿಯ ದೃಷ್ಟಿ ಯಲ್ಲಿದ್ದರೆ... 5). 6, 8, 12 ನೇ ಭಾವಾಧಿಪತಿಗಳು ಧನಸ್ಥಾನದಲ್ಲಿದ್ದರೆ... 6). ಧನ, ಸುಖ, ಪೂರ್ವಪುಣ್ಯಾಧಿಪತಿ, ಭಾಗ್ಯಾಧಿಪತಿ, ದಶಮಾಧಿಪಗಳು 6 ಅಥವಾ 12 ನೇ ಭಾವದಲ್ಲಿದ್ದರೆ... 7). ಜಾತಕರು ಕೆಮದೃಮ ಹಾಗೂ ಶಟಕ ಯೋಗಗಳಲ್ಲಿ ಜನಿಸಿದ್ದರೆ... 8). ಲಗ್ನಾಧಿಪತಿ 6.8.12 ರಲ್ಲಿ ಪಾಪಗ್ರಹಗಳ ಯುತಿಯಲ್ಲಿದ್ದು, ಅಷ್ಟಮಾಧಿಪತಿಯಿಂದ ವೀಕ್ಷಿಸಲ್ಪಟ್ಟರೆ.. ಜಾತಕರು ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಬಡತನದಲ್ಲಿ ನರಳುತ್ತಾರೆ. ಜನ್ಮ ಜಾತಕದ ಶುಕ್ರನಿದ್ದ ರಾಶಿಗೆ ಗೋಚರದ ಕೇತು ಸಂಚಾರಕಾಲದಲ್ಲಿ, ಜಾತಕನ ಹೆಂಡತಿ/ ಸಹೋದರಿ ಇವರಿಗೆಲ್ಲಾ ದುಃಖ, ಹಣಕಾಸಿನ ತೊಂದರೆ, ಬರಬೇಕಾಗಿರುವ ಹಣದ ಹರಿವೂ ನಿಂತುಹೋಗುತ್ತೆ, ಹೊಂಗಸರಿಂದ ತೊಂದರೆ, ದಾಂಪತ್ಯದಲ್ಲಿ ಬಿರುಕು, separation / divorce ಆಗಬಹುದು, ಕೋರ್ಟ್ ಕಚೇರಿ ವಿವಾದ, ಕುಟುಂಬದಲ್ಲಿ ವಿವಾದ, ಪತ್ನಿಗೆ ಆರೋಗ್ಯದಲ್ಲಿ ಏರುಪೇರು, restless ಜೀವನ. ಮನುಜನ ವಿವಿಧ ಮಾನಸಿಕ ಅವಸ್ಥೆಗಳು ******************************** *ಚಂದ್ರ - ರಾಹು ಸಂಯೋಗ : --* ಈ ಸಂಯೋಗ ಇರುವ ಜಾತಕರದು ಸ್ವಾರ್ಥ ಪರತೆ, ಹಠ, ಛಲ, ಯಾವುದೇ ವ್ಯವಹಾರವಾಗಲಿ ತಮಗೇ ಮೊದಲು ಸಿಗಬೇಕು, ಅಗಣಿತ ಲಾಭವಾಗಬೇಕು ಎಂಬಾಸೆಯುಳ್ಳವರು. ರಾಹುವಿನಿಂದ ಪೈಶಾಚಿಕ ಮನಸ್ಸು, ಇವರನ್ನು ಸುಮ್ಮನಿರಲೂ ಬಿಡುವುದಿಲ್ಲ. ಸದಾ ಗ್ರಹಬಡಿದವರಂತೆ ಕಾಣುತ್ತಾರೆ. ಶಕ್ತಿ ದೇವಸ್ಥಾನಗಳಿಗೆ ಹೋಗುತ್ತಾರೆ, ನಿಂಬೆ ಹಣ್ಣಿನ ದೀಪ ಹಚ್ಚುವುದು, ದೇವಿಯ ಅಖಂಡ ಪೂಜೆ, ಮೈಮೇಲೆ.ದೇವರು ಬಂದಂತೆ ಕುಣಿಯುವುದು, ಹರಿಸಿನ - ಕುಂಕುಮ - ವಿಧವಿಧವಾದ ಎಲೆ, ಕಾಯಿಗಳನ್ನು ಅಗಿದು ತಿನ್ನುವುದು, ಮೈಕೈಗೆಲ್ಲಾ ಶಸ್ತ್ರಗಳಿಂದ ಚುಚ್ಚಿಕೊಂಡು, ಕುಣಿದು ಭಕ್ತಿ ಪ್ರದರ್ಶನ ಮಾಡುವುದು, ಕೆಲವೊಮ್ಮೆ ಮೈಮೇಲಿನ ಬಟ್ಟೆಯ ಪರಿವೆಯೂ ಇರುವುದಿಲ್ಲ. ಇವರುಗಳು ಪ್ರೇತ, ಭೂತ, ಭಾನಾಮತಿ ಮುಂತಾದುವುಗಳ ವಶಕ್ಕೆ ಬೇಗ ಒಳಗಾಗುತ್ತಾರೆ, ಗಾಳಿ ಸಂಬಂಧ, ಪ್ರೇತ ಸಂಭಂದ ಗ್ರಹಗಳು ಇವರ ಶರೀರದಲ್ಲಿ ಸೇರಿ ಇವರ ಬುದ್ಧಿ, ಮನಸ್ಸು, ಶರೀರ, ನರಗಳನ್ನು ದೌರ್ಬಲ್ಯ ಮಾಡಿ ಯಾವ ಕೆಲಸಕ್ಕೂ ಬರದವರಂತೆ ಮಾಡುತ್ತವೆ. ಇದರಿಂದಲೇ ದೇವರು ಮೈಮೇಲೆ ಬಂದವರಂತೆ ಕುಣಿದು, ದಣಿದು ನೆಲಕ್ಕೆ ಬೀಳುತ್ತಾರೆ. ಈ ಸಂಯೋಗಕ್ಕೆ ಕುಜನ ಸಂಬಂದ ಬಂದರೆ ಪರಿಸ್ಥಿತಿ ಕ್ರೂರವಾಗಿ ಶರೀರಕ್ಕೆ ಹಾನಿ ಮಾಡಿಕೊಳ್ಳುತ್ತಾರೆ. ಶನಿ ಸಂಬಂದ ಬಂದ್ರೆ ಮಂಕಾಗಿ, ಮನೋರೋಗದವರ ಹಾಗೆ ಮೂಲೆಯಲ್ಲಿ ಕುಳಿತುಬಿಡುತ್ತಾರೆ, ಇಲ್ಲವೇ ಮನೆ ಬಿಟ್ಟು ಹೋಗುತ್ತಾರೆ. ಚಂದ್ರನು ಬಲಿಷ್ಠ ನಾಗಿದ್ದರೆ ಇಂತಹ ಪರಿಸ್ಥಿತಿ ಬರುವುದಿಲ್ಲ, ಬಂದರೂ ಶಾಂತರಾಗಿರುತ್ತಾರೆ, ಪರಿಸ್ಥಿತಿ ವಿಕೋಪಕ್ಕೆ ಹೋಗದಿದ್ದರೂ, ಆ ಛಾಯೆ ಹೋಗುವುದಿಲ್ಲ, ಒಂದಲ್ಲ ಒಂದು ದಿನ ಮನೋರೋಗಕ್ಕೆ ತುತ್ತಾಗುತ್ತಾರೆ. ರಾಹು ಬಲಿಷ್ಟ ನಾದರೆ ಒಂದು ರೀತಿಯ ಗ್ರಹಣಯೋಗವುಂಟಾಗಿ ಬಳಲುವರು. ರಾಹು - ಸರ್ಪ, ಬಾಯಿ. ಚಂದ್ರನನ್ನು ನುಂಗಿ ತನ್ನ ಹೊಟ್ಟೆಯಲ್ಲಿ ಸೇರಿಸಿಕೊಳ್ಳುವನು, ಹಾಗಾಗಿ ಮನಸ್ಸೂ, ಜೀವನ ಎರಡೂ ಕಾಣದೆ, ಸಂಘರ್ಷದ ಜೀವನದಿಂದ ತೊಳಲಾಡುವರು. ಕಷ್ಟಗಳಿಗೆ ಹೆದರಿ , ಜೀವನವೇ ಬೇಡ ಎನ್ನುವ ನಿರ್ಧಾರಕ್ಕೆ ಬಂದು ವಿಷಪ್ರಾಶನದಿಂದ ಆತ್ಮಹತ್ಯೆ ಮಾಡಿಕೊಳ್ಳುವರು. ರಾಹು - ಚಂದ್ರನ ಸಂಯೋಗ, ನೀಚ ರಾಶಿ - ನವಾಂಶ, ಪಾಪ ರಾಶಿ -ನವಾಂಶ, ಕ್ರೂರ ರಾಶಿ - ನಮಾಂಶ ದಲ್ಲಿದ್ದು ಕುಜನ ಸಂಪರ್ಕ ದಲ್ಲಿದ್ದರೆ, ನೀಚರ ಸಹವಾಸದಿಂದ ಜೀವನ ಹಾಳು ಮಾಡಿಕೊಳ್ಳುವರು. ಈ ಮೂರರ ಸಂಯೋಗದ ಜೊತೆ ಶುಕ್ರನೇನಾದರೂ ಸೇರಿದರೆ, ಅತ್ಯಾಚಾರ - ಕೊಲೆಗೀಡಾಗುವರು. ದೇಹದ ಅಂಗಗಳನ್ನು ಕತ್ತರಿಸಿಕೊಳ್ಳೋದು, ವಾಹಣಗಳಡಿಗೆ ತಲೆ ಕೊಟ್ಟು ಸಾಯೋದು, ಉದ್ದೇಶಪೂರ್ವಕವಾಗೇ ಅಪಘಾತ ಮಾಡುವುದು. ಜೈಲುವಾಸ, ಅಲೆಮಾರಿ ಜೀವನ, ಎಲ್ಲವನ್ನೂ ಕಳೆದುಕೊಂಡು ಆತ್ಮಹತ್ಯಾ ನಿರ್ಧಾರ ಮಾಡುವುದು. ದುಶ್ಚಟಗಳಿಗೆ ಬಲಿಯಾಗುವುದು. ಅಫೀಮು, ಗಾಂಜಾ, ಡ್ರಗ್ಸ್ ತೆಗೆದುಕೊಳ್ಳುವುದು ಮಾಡುತ್ತಾರೆ. ಇಂತಹವರಿಗೆ ಶನಿ ಸಂಪರ್ಕ ಬಂದರೆ ಎತ್ತರದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದು, ಅಂಗಾ0ಗಗಳಿಗೆ ಊನ ಮಾಡಿಕೊಳ್ಳುವುದು, ಹಿರಿಯರು - ಕಿರಿಯರು, ಬಂಧುಗಳು ಎಂಬ ತಾರತಮ್ಯವೂ ಇಲ್ಲದೆ ಎಲ್ಲರನ್ನೂ ಹೆದ್ರಿಸಿ, ಬೆದರಿಸಿ ಕೊಲೆ ಮಾಡಲು ಸಜ್ಜಾಗುವುದು. ಒಟ್ಟಿನಲ್ಲಿ... ಭಯಂಕರ, ವಿಕೃತ ಮನಸ್ಸಿನವರಾಗಿರುತ್ತಾರೆ. ಚಂದ್ರ ಬಲವಾಗಿ ಶುಭದೃಷ್ಟಿಇದ್ದರೆ ಫಲಗಳಲ್ಲಿ ವ್ಯತ್ಯಾಸವಿರುತ್ತೆ... ಇದು, ಸುಮಾರು ಜಾತಕಗಳಲ್ಲಿ ಈ ಮೇಲಿನ ಗ್ರಹ ಸಂಯೋಗವಿದ್ದಾಗ ನಾನು ಮನಗಂಡ ವಿಶಯ. 💥 *ಹರಿಃ ಓಂ* 💥 *ಶ್ರೀ ಗಣೇಶಾಯ ನಮಃ* *ಶ್ರೀ ಗುರುಭ್ಯೋನಮಃ* *ಜಾತಕನ ಕುಂಡಲಿಯಲ್ಲಿ ಗ್ರಹಗಳು ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು* *ಮತ್ತು ಇವುಗಳ ಪರಿಹಾರಗಳು* ( ಲಾಲ್ ಕಿತಾಬ್ ಪರಿಹಾರಗಳು) *ಗ್ರಹಗಳು* ೧)ನೀಚತ್ವದಲ್ಲಿ ೨)ಶತೃಕ್ಷೇತ್ರಗಳಲ್ಲಿ ೩)ದುಸ್ಥಾನಗಳಲ್ಲಿ ಅಶುಭರ ಸಂಪರ್ಕದಲ್ಲಿದ್ದರೆ ೪)ಅಸ್ತಂಗತ 5) ೬, ೮೧೨ನೇ ಸ್ಥಾನಗಳಲ್ಲಿದ್ದರೆ. ೬)ಕೇಂದ್ರಾದಿಪತಿಯಾಗಿ ತನ್ನದಲ್ಲದ ಮತ್ತೊಂದು ಕೇಂದ್ರದಲ್ಲಿದ್ದರೆ. ೭)ಗ್ರಹ ಯುದ್ದದಲ್ಲಿ ಪರಾಜಿತ ಈ ರೀತಿ ಇದ್ದಾಗ ಗ್ರಹಗಳು ಬಲಹೀನರೆಂದು ಪರಿಗಣಿಸಲಾಗುತ್ತದೆ. *ರವಿಯಿಂದ ಉಂಟಾಗುವ ತೊದರೆಗಳು ಮತ್ತು ಅದಕ್ಕೆ ಪರಿಹಾರಗಳು* *ತೊಂದರೆಗಳು* :- ಆತ್ಮ ವಿಶ್ವಾಸದ ಗೌರವದ ಕೊರತೆ,ದೈರ್ಯ,ಉತ್ಸಾಹಗಳು ಇಲ್ಲದಿರುವಿಕೆ,ಇತರರ ಬಗ್ಗೆ ಹೆದರಿಕೆ. ಮುನ್ನುಗ್ಗುವವರಲ್ಲ. ಎಲ್ಲದಕ್ಕೂ ಇತರರ ಮೇಲೆ ಸದಾ ಅವಲಂಬನೆ ಜೀವನದಲ್ಲಿ ಸೋಲು,ಮೇಲಾಧಿಕಾರಿಗಳಲ್ಲಿ ಸದಾವಿರಸ,ತಂದೆಯ ಅಸಹಕಾರ,ಮಗನಿಂದ ಮಾನಸಿಕ ಹಿಂಸೆ,ಬಲಗಣ್ಣಿನಲ್ಲಿ ತೊಂದರೆ,ಜೀವನದಲ್ಲಿ ಸಮಸ್ಯೆಗಳಿಂದ ನೊಂದು ಸಂಸಾರದಲ್ಲಿ ಯಾರಾದರು ಸನ್ಯಾಸಿಯಾಗುತ್ತಾರೆ,ಕಳ್ಳ ತನ ಅಥವ ಸರ್ಕಾರದಿಂದ ಶಿಕ್ಷೆ, ಪತ್ನಿಯ ಸಮಸ್ಯೆ,ಇದರಿಂದಾಗಿ ಮಾನಸಿಕನೋವು, ಉತ್ಸಾಹಹೀನತೆ,ಅಶಕ್ತತೆ, ಹಸಿವು ಇಲ್ಲದಿರುವಿಕೆ,ಹಾಗು ಅಜೀರ್ಣತೆ ಕ್ಷೀಣನಾಡಿಬಡಿತ,ಹೃದಯದೌರ್ಬಲ್ಯತೆ,ರಕ್ತ ಚಲನೆಯಲ್ಲಿ ಕೊರತೆ,ನರದೌರ್ಬಲ್ಯ,ದೃಷ್ಟಿದೋಷ,ಸಂದಿವಾತ ಮತ್ತು ಮೂಳೆಗಳು ದುರ್ಬಲವಾಗಿರುತ್ತವೆ. *ಪರಿಹಾರಗಳು:-* ಶಿವಮತ್ತು ರವಿಯನ್ನು ಆರಾಧಿಸಿ, ೨೩ರಿಂದ೨೪ನೇ ವಯಸ್ಸಿನೊಳಗೆ ವಿವಾಹವಾಗಿ, ರವಿಗೆ ಸಂಬಂದಿಸಿದ ಇತರರು ನೀಡಿದ ವಸ್ತುಗಳನ್ನು ದೇವಸ್ಥಾನಕ್ಕೆ ದಾನಮಾಡಿ, ಬಿಳಿ ಅಥವ ಗುಲಾಬಿಬಣ್ಣದ ವಸ್ತುಗಳನ್ನು ಉಪಯೋಗಿಸಿ, ಸಕ್ಕರೆನೀರನ್ನು ಗುಲಾಬಿ ಪುಷ್ಪಗಳೊಂದಿಗೆ ಉದಯಿಸುತ್ತಿರುವ ರವಿಗೆ ಅರ್ಪಿಸಿ. ಸರ್ಕಾರದಲ್ಲಿನ ಉದ್ಯೋಗಿಯನ್ನು ಅಥವ ವೈದ್ಯರನ್ನು ಆದರಿಸಿ. ಕುರುಡರಿಗೆ,ಕೋತಿ,ಅಥವ ಹುಂಜಕ್ಕೆ ಆಹಾರವನ್ನು ನೀಡಿ. ಸಂಜೆ ಇರುವೆಗಳಿಗೆ ಅಕ್ಕಿ,ಸಕ್ಕರೆ ಎಳ್ಲನ್ನು ಕೊಡಿ. ಆಹಾರ ತೆಗೆದುಕೊಳ್ಲುವುದಕ್ಕೆ ಮುಂಚೆ ಅಗ್ನಿಗೆ ಸ್ವಲ್ಪ ಅರ್ಪಿಸಿ. ಬೆಲ್ಲ,ತಾಮ್ರ,ಚಿನ್ನವನ್ನು ದಾನಮಾಡಿ. ತಾಮ್ರದ ಅಥವ ಲೋಹದ ನಾಣ್ಯವನ್ನು ಹರಿಯುವ ನೀರಿನಲ್ಲಿ ಹಾಕಿ ಸೂರ್ಯಗ್ರಹಣದ ದಿನ ಹರಿಯುವ ನೀರಲ್ಲಿ ಇದ್ದಿಲು,ಸಾಸಿವೆಕಾಳು ಅಥವ ಬಾರ್ಲಿಯನ್ನು ಹಾಕಿ. ಕೆಲಸವನ್ನು ಆರಂಬಿಸುವ ಮೊದಲು ಸ್ವಲ್ಪ ಸಿಹಿಯನ್ನು ತಿಂದು ನೀರುಕುಡಿಯಿರಿ. ಮನೆಯಲ್ಲಿ ಅಡುಗೆ ಮನೆ ಪೂರ್ವದ ಗೋಡೆಯ ಕಡೆ ಇರಲಿ. ಸುಳ್ಳು ಸಕ್ಷ್ಯ ಹೇಳದಿರಿ,ಮಾಂಸ ಮತ್ತು ಮದ್ಯಗಳನ್ನು ಬಿಡಿ. ಉಪ್ಪನ್ನು ಕಡಿಮೆ ಉಪಯೋಗಿಸಿ ಮತ್ತು ಭಾನುವಾರಗಳಂದು ಉಪವಾಸಮಾಡಿ. ವಿಷ್ಣುವನ್ನು ಆರಾಧಿಸಿ ಮತ್ತು ಹರಿವಂಶವನ್ನು ಓದಿ. ದಗ್ಧ ತಿಥಿ (ಯೋಗ) ***************** ದಗ್ಧ ದಿನ, ದಗ್ಧ ತಿಥಿ, ದಗ್ಧ ಯೋಗ ಈ ಮೂರೂ ಪದಗಳು ಒಂದೇ ಅರ್ಥವನ್ನು ಕೊಡುವುವು. ತಿಥಿ, ವಾರಗಳು ಸೇರುವುದರಿಂದ ಉಂಟಾಗುವ ಒಂದು ಅಶುಭ ಯೋಗವಿದು. ಭಾನುವಾರ. : . ದ್ವಾದಶಿ ತಿಥಿ ಸೋಮವಾರ : ಏಕಾದಶಿ ಮಂಗಳವಾರ : ಪಂಚಮಿ ಬುಧವಾರ : ತೃತೀಯ ಗುರುವಾರ : ಷಷ್ಠಿ ಶುಕ್ರವಾರ : ಅಷ್ಟಮಿ ಶನಿವಾರ : ನವಮಿ ಈ ತಿಥಿ - ವಾರಗಳು ಸೇರಿದಾಗ ದಗ್ಧ ಯೋಗ ಉಂಟಾಗುವುದು. ದಗ್ದ ಎಂದರೆ ದಹಿಸುವುದು - ಸುಡುವುದು ಎಂದರ್ಥ, ಅಂದರೆ ಈ ಯೋಗದಲ್ಲಿ ಮಾಡಿದ ಕಾರ್ಯಗಳು ನಾಶವಾಗುವುವು. ಶುಭ ಕಾರ್ಯಗಳಾದ ಮದುವೆ, ಉಪನಯನ, ಗೃಹಪ್ರವೇಶ ಮುಂತಾದ ಕಾರ್ಯಗಳನ್ನು ಈ ಯೋಗದಲ್ಲಿ ಮಾಡಿದ್ದೇ ಆದರೆ ಉತ್ತಮ ಫಲವಿಲ್ಲದೆ ಕಷ್ಟ - ನೋವು ಅನುಭವಿಸಬೇಕಾಗುತ್ತದೆ. ಅಭಿಜಿನ್ಮಹೂರ್ತ ************** 1, *ನಕ್ಷತ್ರ ದೋಷಮ್ ತಿಥಿವಾರ ದೋಷಮ್ ಗಂಡಾಂತ ದೋಷಮ್ ಕುಮುಹೂರ್ತ ದೋಷಮ್ ಲಗ್ನಾದಿ ಪಂಚಾಂಗ ವಿರುದ್ಧ ದೋಷಮ್ ನಿಹಂತ್ಯ ದೋಷಾಮ್ ಅಭಿಜಿನ್ಮಹೂರ್ತಮ್* 2. ಅವಗಣ ಶತ ದೋಷಮ್ ಲಕ್ಷಕೋಟಿ ಪ್ರದೋಷಮ್ ಆಯುತ ವಿಯುತ ದೋಷಮ್ ಶಂಖಪದ್ಮಾದಿದೋಷಮ್ ರವಿ ಶನಿ ಕುಜ ದೋಷಮ್ ಹರತು ಸಕಲ ದೋಷಮ್ ಅಂತ್ಯ ಮಧ್ಯಾಹ್ನ ಲಗ್ನಮ್ 3. *ವಿಷ ವ್ಯತೀಪಾತ ಕುಜಾರ್ಥ ದೋಷಮ್ ಏಕಾರ್ಗಳಾವೀನ ಭವ ಸಂಭವಾಶ್ಚ ಖಮದ್ಯದೋಷಮ್ ಮಪಿ ಚಂಡರಶ್ಮಿ ನಿಹಂತ್ಯ ದೋಷಾಮ್ ಅಭಿಜಿನ್ಮಹೂರ್ತಮ್* ಇವು ಜ್ಯೋತಿಷ್ಯ ನಿಘಂಟು ವಿನಲ್ಲಿ ಇರುವ ಶ್ಲೋಕಗಳು ಈ ಮೇಲಿನ ಶ್ಲೋಕಗಳೆಲ್ಲಾ ಅಭಿಜಿನ್ಮಹೂರ್ತದ ಮಹತ್ವವನ್ನು ಸಾರುತ್ತಾ ಇವೆ. ಎಷ್ಟೆಲ್ಲಾ ದೋಷಗಳು ಅಭಿಜಿನ್ ಮಹೂರ್ತದಿಂದ ನಾಶವಾಗುತ್ತೆ ಅಂದಾಗ ಈ ಅಭಿಜಿನ್ ಮಹೂರ್ತ ಎಂದರೇನು ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುತ್ತೆ ಅಲ್ವಾ...? ಈ ಅಭಿಜಿನ್ಮಹೂರ್ತ ಪ್ರತಿದಿನವೂ ಬರುತ್ತೆ. ಪ್ರತಿದಿನ ಮಧ್ಯಾಹ್ನ 12 ರಿಂದ 12 - 30 ರ ಒಳಗಿನ ಈ 20 ರಿಂದ 30 ನಿಮಿಷಗಳ ಕಾಲವನ್ನ ಅಭಿಜಿನ್ಮಹೂರ್ತ ಅನ್ನುತ್ತಾರೆ. ಈ ಮಹೂರ್ತ ಲಗ್ನಕ್ಕೆ ದಶಮದಲ್ಲಿ ಸೂರ್ಯ ಬರುವುದರಿಂದ, ಸೂರ್ಯನು ದಶಮದಲ್ಲಿ ದಿಗ್ಬಲನಾಗಿರುವುದರಿಂದ ಈ ಅಭಿಜಿನ್ಮಹೂರ್ತಕ್ಕೆ ಬಲವಿರುವುದು. ಹಾಗಾಗಿ ಈ ಮಹೂರ್ತ ಶ್ರೇಷ್ಠ ಎನ್ನಲಾಗಿದೆ. ಆದ್ರೆ ಸೂರ್ಯ ನೀಚನಾಗಿರಬಾರದು, ಮತ್ತು ಪಾಪಗ್ರಹಗಳ ಸಂಬಂಧ ಬರಬಾರದು ಹಾಗೂ ಮೂಲ ಜಾತಕದ ಸೂರ್ಯ ನೀಚನಾಗಿರಬಾರದು. *ಕರಣದಿಂದ ಕಾರ್ಯಸಿದ್ಧಿ.* ********************* ನಾವು ಮಾಡುವ ಪ್ರತಿ ಶುಭ ಕಾರ್ಯಕ್ಕೆ ಗುರುಬಲ, ತಾರಾಬಲ, ಚಂದ್ರಬಲ, ಪಂಚಾಂಗ ಶುದ್ಧಿ ನೋಡಿ ಕಾರ್ಯ ಶುರು ಮಾಡುತ್ತೇವೆ. ಹಾಗೆಯೇ ಪ್ರತಿ ಹೊಸ ಕೆಲಸ ಪ್ರಾರಂಭಿಸುವಾಗ ಗುರುಬಲದ ಹೊರತಾಗಿಯೂ ತಾರಾಬಲ ಚಂದ್ರಬಲ ನೋಡಿ ಕಾರ್ಯಾರಂಭ ಮಾಡುತ್ತೇವೆ.. ಆದರೂ ಒಮ್ಮೊಮ್ಮೆ ಕಾರ್ಯವಿಘ್ನವಾಗಿ ಮಾನಸಿಕವಾಗಿ ಬಳಲುತ್ತೇವೆ. ಕೆಲವು ವೇಳೆ ಶತ್ರುಗಳಿಂದ ಮಾಂತ್ರಿಕ ರೀತಿಯಿಂದಲೂ ಅಡ್ಡಿ ಆತಂಕಗಳು ಬರಬಹುದು ನಮ್ಮ ಪ್ರಯತ್ನ ವಿಫಲವಾದಾಗ, ನಮ್ಮ ಏಳಿಗೆಗೆ ಅಡ್ಡಿ ಆತಂಕಗಳು ಬಂದಾಗ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ನಂಬಿಕೆ ಕಳೆದುಕೊಳ್ಳುವುದು ಸಹಜ. ಕೇವಲ ತಾರಾಬಲ, ಚಂದ್ರಬಲ, ತಿಥಿವಾರ ನಕ್ಷತ್ರ ಗಳಷ್ಟೇ ಅಲ್ಲ ನಾವು ಕರಣಗಳಿಗೂ ಪ್ರಾಮುಖ್ಯತೆ ಕೊಡಬೇಕಾಗುತ್ತದೆ. ಯಾವ ಯಾವ ಕರಣಗಳಲ್ಲಿ ಯಾವ ಕೆಲಸ ಶುಭವಾಗುವುದೆಂದು ನೋಡೋಣ. ಕರಣಗಳು ಒಟ್ಟು ಹನ್ನೊಂದು ಅವುಗಳೆಂದರೆ 1, ಭವ. 2, ಬಾಲವ. 3, ಕೌಲವ. 4, ತೈತುಲ. 5, ಗರಜ. 6, ವಣಿಜ. 7, ಭದ್ರ. 8, ಶಕುನಿ. 9, ಚತುಶ್ಮಾನ್. 10 ನಾಗವಾನ್. 11, ಕಿಂಸ್ತುಜ್ಞ ಯಾವ ಕರಣಗಳಲ್ಲಿ ಯಾವ ಕಾರ್ಯ ಮಾಡಬಹುದು, ಫಲಗಳೇನೆಂದು ತಿಳಿಯೋಣ. *1. ಭವ* ಈ ಕರಣದಲ್ಲಿ ಯಾವುದೇ ಹೊಸ ಕೆಲಸ ಪ್ರಾರಂಭಿಸಿದರೆ ಶುಭ. ಉತ್ತಮ ಫಲಿತಾಂಶ ವನ್ನು ನಿರೀಕ್ಷಿಸಬಹುದು. *2, ಬಾಲವ : ಈ ಕರಣದಲ್ಲಿ ಬ್ಯಾಂಕು, ವಿದ್ಯಾಸಂಸ್ಥೆ, ಒಪ್ಪಂದ ಮುಂತಾದ ಕೆಲಸಗಳು ಪ್ರಾರಂಭಿಸಬಹುದು. ಶುಭ *3, ಕೌಲವ: ಸರಕಾರದ ಕೆಲಸ, ಪಾರ್ಟ್ನರ್ಶಿಪ್ ವ್ಯಾಪಾರ, ಹೊಸ ವ್ಯವಹಾರಕ್ಕೆ ಮಾತುಕತೆಗೆ ಉತ್ತಮ. *4, ತೈತುಲ : ಶುಭಕಾರ್ಯಕ್ಕೆ ಅಷ್ಟು ಸಮಂಜಸವಲ್ಲ ಯಾವುದೇ ಸಂಸ್ಥೆ ಯಾಗಲೀ, ಮನೆ ಕಟ್ಟಡ ನಿರ್ಮಾಣ, ಭೂಮಿ ಅಗೆಯುವ ಕೆಲಸ ಮಾಡಬಾರದು. ಮಿಶ್ರಫಲ. *5, ಗರಜ:* ಭೂಮಿ ಕ್ರಯ - ವಿಕ್ರಯ, ರಸ್ತೆ ನಿರ್ಮಾಣ, ಮನೆ ಕಟ್ಟಲು ಭೂಮಿ ಅಗೆಯುವುದು, ಕಟ್ಟಡ ನಿರ್ಮಾಣಕ್ಕೆ, ಫ್ಯಾಕ್ಟರಿ ನಿರ್ಮಾಣಕ್ಕೆ ಉತ್ತಮವಾದುದು.. ಶುಭ. *6, ವಣಿಜ : ಹೊಸ ವ್ಯಾಪಾರ - ವ್ಯವಹಾರ ಪ್ರಾರಂಭ, ಅಂಗಡಿ ಪ್ರಾರಂಭ, ಬ್ಯಾಂಕಿನ ವಹಿವಾಟು, ಸಾಲ ಕೊಡುವುದು - ಪಡೆಯುವುದು, ಬಂಡವಾಳ ಹೂಡುವುದು, ಹಣ ಶೇಖರಣೆ ಮುಂತಾಡುವಕ್ಕೆ ಈ ಕರಣವು ಸೂಕ್ತ. ಶುಭ. *7, ಭದ್ರ : ಯಾವುದೇ ಕೆಲಸವಾದರೂ ಪೂರ್ತಿ ಆಗುವುದಿಲ್ಲ, ಅರ್ಧಕ್ಕೇ ನಿಲ್ಲುವುದು, ನ್ಯಾಯಾಲಯದ ಮೆಟ್ಟಲೇರಬೇಕಾಗುವುದು, ನೆರೆಹೊರೆಯರಲ್ಲಿ ಜಗಳ ಆಗುವುದು, ಒಂದುವೇಳೆ ಬಲವಂತವಾಗಿ ಕಾರ್ಯ ಸಾಧಿಸಿದರೆ ಮರಣದಲ್ಲಿ ಪರ್ಯಾವಸಾನವಾಗುವುದು. ವಿವಾಹವಾದರೆ ನೆಮ್ಮದಿ ಜೀವನವಿಲ್ಲ, ಗೃಹಾರಂಭ, ಗೃಹಪ್ರವೇಶ ಮಾಡಿದರೆ ಆ ಮನೆಯು ಅನ್ಯರ ವಶವಾಗುವುದು, ದೇವತಾ ಪ್ರತಿಷ್ಟಾಪನೆ ಮಾಡಿದರೆ ಮಾಡಿದ ವ್ಯಕ್ತಿಗೆ ತೊಂದರೆ. ಅಶುಭ. *8, ಶಕುನಿ : ಈ ಕರಣದಲ್ಲಿ ಪ್ರಾರಂಭಿಸಿದ ಯಾವುದೇ ಕೆಲಸವು ಪುನಃ ಪುನಃ ಪ್ರಾರಂಭಿಸುವ ಹಾಗೆ ಆಗುತ್ತದೆ , ಕೆಲಸ ಪೂರ್ತಿಯಾಗುವುದಿಲ್ಲ, ವಿಪರೀತ ಖರ್ಚು, ಮನಃಶಾಂತಿ ಇರುವುದಿಲ್ಲ. ಅಶುಭ. *9, ಚತುಶ್ಮಾನ್ : ಇದೊಂದು ಕ್ರೂರ ಕರಣ, ಅಶಾಂತಿಯ ವಾತಾವರಣ ನಿರ್ಮಾಣ ವಾಗುತ್ತದೆ, ವಿಪರೀತ ಧನಹಾನಿ, ಕೋರ್ಟು ವ್ಯವಹಾರದಲ್ಲಿ ಅಪಜಯ, ದುಷ್ಟ ಜನರಿಂದ.ಮಾನಸಿಕ ಹಿಂಸೆ, ಚಿಂತೆ. ಅಶುಭ. *10, ನಾಗವಾನ್*: ಈ ಕರಣದಲ್ಲಿ ಯಾವ ಕೆಲಸ ಮಾಡಿದರೂ ಜಗಳ, ಕದನ, ಅಪಘಾತ, ಕಾರ್ಯವಿಘ್ನ, ಶತ್ರುಭಯ, ಅಶಾಂತಿಯ ವಾತಾವರಣ, ಮಾಂತ್ರಿಕ ಭಾಧೆ ಉಂಟಾಗುತ್ತದೆ. *11, ಕಿಂಸ್ತುಜ್ಞ : ಈ ಕರಣದಲ್ಲಿ ಪ್ರಾರಂಭಿಸಿದ ಯಾವುದೇ ಕೆಲಸವು ಪರರ ಪಾಲಾಗುತ್ತದೆ, ಸ್ವಾತಂತ್ರ್ಯ ದಿಂದ ವಂಚಿತರಾಗುತ್ತಾರೆ, ಭ್ರಮಾಜೀವನ. ಅಶುಭ. ಆದಕಾರಣ ಯಾವುದೇ ಕೆಲಸ ಪ್ರಾರಂಭಿಸುವಾಗ ತಾರಾಬಲ, ಚಂದ್ರಬಲ, ದಿನಶುದ್ಧಿಯ ಜೊತೆಗೆ ಕರಣ ಶುದ್ಧಿಯೂ ನೋಡಿ ಮಾಡಿದರೆ ಒಳಿತು. ಕಛೇರಿ ವಾಸ್ತು :-- ನಿಮ್ಮ ಕೆಲಸದ ಟೇಬಲ್ ಮೇಲೆ ದೇವರ ಮೂರ್ತಿ ಯನ್ನಾಗಲೀ , ಫೋಟೋವನ್ನಾಗಲೀ ಇಡಬಾರದು. ನೀವು ಕೆಲಸ ಮಾಡುವ ಟೇಬಲ್ ಮೇಲೆ ಊಟ ಮಾಡುವುದು ಒಳ್ಳೆಯದಲ್ಲ. ಕೆಲಸ ಮಾಡುವ ಟೇಬಲ್ ಮೇಲೆ ಯಾವುದೇ ರೀತಿಯ ಮನರಂಜನಾ ಕೆಲಸಗಳನ್ನು ಮಾಡಬಾರದು. ಕಚೇರಿಯ ಕೆಲಸಕ್ಕಷ್ಟೇ ಟೇಬಲ್ ಮೀಸಲಾಗಿರಬೇಕು. ಜನ್ಮಜಾತಕದ ಶುಕ್ರನಿದ್ದ ರಾಶಿಗೆ ಗೋಚರದ ರಾಹು ಬಂದಾಗ, ಹಣದ ತೊಂದರೆ,ವಾಹನ - ಆಸ್ತಿ ಪ್ರಾಪ್ತಿ, ಆರೋಗ್ಯ ಸಮಸ್ಯೆ, ಹೆಂಡತಿ ಅಥವಾ ಸಹೋದರಿಯ ಜೊತೆ ಮನಸ್ತಾಪ, ತಪ್ಪು ತಿಳುವಳಿಕೆ. ಶುಕ್ರ - ಸ್ತ್ರೀ ರಾಹು - ಸೀಕ್ರೆಟ್ ರಹಸ್ಯವಾಗಿ ಸ್ತ್ರೀಯ ಸಂಗ ಶುಕ್ರ - ಸ್ತ್ರೀ ರಾಹು ಮಾಯಾಜಾಲ ಸ್ತ್ರೀಯ ಮಾಯಾಬಲೆಯಲ್ಲಿ ಸಿಲುಕುವ ಸಂಭವ. ಕಚೇರಿ ವಾಸ್ತು :--- ಕಚೇರಿಯಲ್ಲಿ ಉಪಯೋಗಿಸುವ ಟೇಬಲ್ ಚೌಕಾಕಾರ ಅಥವಾ ಆಯತಾಕಾರ L " ಆಕಾರದ ಟೇಬಲ್ ಸರಿಯಾಗಲಾರದು, ನಾಲ್ಕು ಮೂಲೆಗಳಿರುವ ಟೇಬಲ್ ಉತ್ತಮವೆನಿಸುತ್ತದೆ. ಜನ್ಮ ಜಾತಕದ ಶುಕ್ರನಿದ್ದ ರಾಶಿಗೆ ಗೋಚರದ ಶನಿ ಬಂದಾಗ, ಹೆಂಡತಿಯಿಂದ ಲಾಭ, ಆಕಸ್ಮಿಕ ದ್ರವ್ಯಲಾಭ, ಪತ್ನಿಗೆ ಸೋಮಾರಿತನ, ಮನೆ ಅಥವಾ ಆಸ್ತಿ ಖರೀದಿ ಅಥವಾ ಮಾರಾಟ, ವಾಹನ ಖರೀದಿ( ಹಳೆಯದು) , ಅಭಿವೃದ್ಧಿ. ಹೆಂಡತಿಗೆ ಗ್ಯಾಸ್ಟ್ರಿಕ್ ಆಗುವ ಸಾಧ್ಯತೆ. ಕಛೇರಿ ವಾಸ್ತು:--- ಕಚೇರಿಯಲ್ಲಿ ಕುಳಿತುಕೊಳ್ಳುವ ದಿಕ್ಕು ಪೂರ್ವಮುಖವಾಗಿದ್ದರೆ ... ಬಲಬದಿಗೆ ಭಾರವಾದ ಟೇಬಲ್ ಇರಿಸಿ, ಅದರ ಮೇಲೆ ಫೈಲ್, ಫೋಲ್ಡರ್, ಎಲೆಕ್ಟ್ರಾನಿಕ ಪರಿಕರಗಳಾದ ಕಂಪ್ಯೂಟರ್ ಇತ್ಯಾದಿಗಳನ್ನಿರಿಸಿ. ಒಂದುವೇಳೆ ಮುಖ ಉತ್ತರದ ದಿಕ್ಕಿಗೆ ಬರುವಂತೆ ಕುಳಿತುಕೊಳ್ಳುವಂತಿದ್ದರೆ, ಎಡಬದಿಗೆ ಭಾರವಾದ ಟೇಬಲ್ಲನ್ನು ಇರಿಸಿ. ಜನ್ಮ ಜಾತಕದ ಶುಕ್ರನಿದ್ದ ರಾಶಿಗೆ ಗೋಚರದ ಶುಕ್ರ ಬಂದಾಗ, ಅದೃಷ್ಟ ಒಲಿದು ಬರುತ್ತೆ, ಧನಲಾಭ, ದ್ರವ್ಯಲಾಭ, ಶುಭಯೋಗ, ಕಲೆಗಳಲ್ಲಿ ಆಸಕ್ತಿ, ವೈಭವ ಯುತ ಜೀವನ. ಕಚೇರಿ ವಾಸ್ತು :-- ಕಚೇರಿಯ (office) , ಮೇಜು ಹಾಗೂ ಕುರ್ಜಿಗಳು ಇರುವ ಜಾಗದಲ್ಲಿ ಸರಿಯಾಗಿ ವಾಸ್ತು ಅನುಸರಿಸಲ್ಪಟ್ಟಲ್ಲಿ ಆಗ ಆ ಕಾರ್ಯಕ್ಷೇತ್ರವು ಅಭಿವೃದ್ಧಿ ಹೊಂದುವುದರಲ್ಲಿ ಯಾವ ಸಂಶಯವೂ ಇಲ್ಲ, ಜೊತೆಗೇ ಅಲ್ಲಿ ಕೆಲಸ ಮಾಡುವವರ ಕಾರ್ಯಕ್ಷಮತೆಯಲ್ಲಿಯೂ ಅಪಾರ ಪ್ರಗತಿ ಕಂಡುಬರಬಲ್ಲದು. ಕೆಲಸ ಮಾಡುವಾಗ ಮುಖವು ಪೂರ್ವ ಅಥವಾ ಉತ್ತರ ದಿಕ್ಕಿಗೆ ಬರುವಂತೆ ಕುಳಿತಾಗ ಮನುಷ್ಯನಿಗೆ ಒಂದು ರೀತಿಯ ತಾಜಾತನ ಉಂಟಾಗುತ್ತದೆ, ಹೆಚ್ಚು ಮನಸ್ಸಿಟ್ಟು ಕೆಲಸ ಮಾಡಲು ಸಾಧ್ಯವಾಗುತ್ತದೆ. ಮುಂದುವರೆಯುವುದು... ಜನ್ಮ ಜಾತಕದ ಶುಕ್ರನಿದ್ದ ರಾಶಿಗೆ ಗೋಚರದ ಗುರು ಬಂದಾಗ ಜಾತಕನ ಪತ್ನಿಗೆ ಶುಭಯೋಗ, ಪುತ್ರಿಗೆ ಯೋಗವೃದ್ಧಿ, ಸ್ತ್ರೀ ಸಂಬಂಧದಿಂದ ಗೃಹವೃದ್ಧಿ ಹಾಗೂ ದ್ರವ್ಯಲಾಭ, ಶುಭಕಾರ್ಯಗಳು ಜರುಗುವುದು. ವಿವಾಹವಾಗದವರಿಗೆ ವಿವಾಹಯೋಗ, ಸ್ತ್ರೀ ಸಂತಾನಯೋಗ, ಹಣದ ತೊಂದರೆ ನಿವಾರಣೆ, ಸ್ತ್ರೀಯರಿಂದ ಸಹಾಯ. ವಾಸ್ತು :-- ಮನೆಯ ಆವರಣ ಗೋಡೆಯ(ಕಾಂಪೌಂಡ್) ಮುಖ್ಯದ್ವಾರ (ಗೇಟ್) ಯಾವುದೇ ದಿಕ್ಕಿಗೆ ಇದ್ದರೂ ಕೂಡ, ಆ ದ್ವಾರದ ಎರಡೂ ಕಂಬಗಳ ಮೇಲೆ... ಮೇಲಿನಿಂದ ಆರು ಅಂಗುಲವನ್ನು ಬಿಟ್ಟು ಕೆಳಬಾಗಕ್ಕೆ, ಸ್ವಸ್ತಿಕದ ಚಿಹ್ನೆಗಳನ್ನು ಸ್ಥಾಪಿಸಬೇಕು. ಮನೆಯ ಆವರಣದ ಗೋಡೆಯ ಮುಖ್ಯದ್ವಾರ ದ ಒಳಗೆ ಎರಡೂ ಬದಿಯಲ್ಲಿ ತುಳಸಿಗಿಡಗಳನ್ನು ನೆಡುವುದು ಅಥವಾ ತುಳಸೀ ಗಿಡವಿರುವ ಕುಂಡಗಳನ್ನು ಸ್ಥಾಪಿಸುವುದು ಒಳ್ಳೆಯದು, ಇದರಿಂದ ಪ್ರವೇಶದ್ವಾರ ಯಾವುದೇ ದಿಕ್ಕಿನಲ್ಲಿದ್ದರೂ ಶುಭ ಪರಿಣಾಮ ಬೀರುತ್ತದೆ. ಜನ್ಮ ಜಾತಕದ ಶುಕ್ರನಿದ್ದ ರಾಶಿಗೆ ಗೋಚರದ ಬುಧ ಬಂದಾಗ, ಭೂಲಾಭ, ಗೃಹಲಾಭ, ಭೂಮಿಯಿಂದ ದ್ರವ್ಯಲಾಭ, ಆತ್ಮೀಯರ ಭೇಟಿ, ಸುಖ, ಶುಭ ವಾಸ್ತು :-- ಮನೆಯಲ್ಲಿ ಅಡಿಗೆಮನೆಗೆ ವಿಶೇಷ ಸ್ಥಾನವಿದೆ, ಅಡಿಗೆ ಮನೆಯ ಆಜ್ಞೆಯ ಭಾಗದಲ್ಲಿ, ಸ್ಟೌವ್ ಬರುವಂತೆಯೂ, ಈಶಾನ್ಯದಲ್ಲಿ ಸಿಂಕ್ ಬರುವಂತೆಯೂ, ದಕ್ಷಿಣ ಹಾಗೂ ಪಶ್ಚಿಮದ ದಿಕ್ಕಿನಲ್ಲಿ ಭಾರವಾಗಿರುವಂತೆ ಅಲ್ಮೇರಾವನ್ನು ಇಡಬೇಕು ಅಡುಗೆಮನೆಯ ಬಾಗಿಲು ಉತ್ತರ ದಿಕ್ಕಿನ ಕಡೆಯಿಂದ ತೆರೆಯುವಂತಿರಬೇಕು. ಅಡುಗೆ ಮನೆಗೆ ಗಾಢ ಬಣ್ಣಗಳಾದ ಕೆಂಪು, ಕಿತ್ತಳೆ, ಕಂದು, ಹಳದಿ ಬಣ್ಣಗಳು ಇದ್ದಲ್ಲಿ ಉತ್ತಮ. ಯಾವುದೇ ಕಾರಣಕ್ಕೂ ಕಪ್ಪು ಬಣ್ಣವನ್ನು ಬಳಸಲೇಬಾರದು. ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ ಪರಿಕರಗಳಾದ ಫ್ರಿಡ್ಜ್, ಮೈಕ್ರೋಒವೆನ್, ಮಿಕ್ಸಿ, ಗ್ರಾಯಿಂಡರ್ ಇವುಗಳನ್ನು ಅಡುಗೆಮನೆಯ ದಕ್ಷಿಣದ ದಿಕ್ಕಿನಲ್ಲಿ, ನೈರುತ್ಯ ಭಾಗಗಲ್ಲಿ ಇಡುವುದು ಒಳಿತು. ಜನ್ಮ ಜಾತಕದ ಶುಕ್ರನಿದ್ದ ರಾಶಿಗೆ ಗೋಚರದ ಕುಜ ಬಂದಾಗ, ರಕ್ತ ಸಂಬಂಧಿಗಳ ಭೇಟಿ, ಗಂಡನಿಗೆ ದ್ರವ್ಯಲಾಭ, ಪುರುಷ /ಸ್ತ್ರೀಯರ ಭೇಟಿ. ವಾಸ್ತು :-- ********** ಮನೆಯ ಬಾಗಿಲುಗಳ ಮೇಲೆ ಶುಭ ಪ್ರತೀಕಗಳಾದ, ಕಲಶದಂತಹ ಚಿತ್ರ, ಲಕ್ಷ್ಮೀ ದೇವಿಯ ಪಾದಗಳು, ಸ್ವಸ್ತಿಕದ ಚಿನ್ಹೆ ಹಾಕಬೇಕು. ಸ್ವಸ್ತಿಕದ ಎರಡೂ ಕಡೆಗಳಲ್ಲಿ ಸಿದ್ಧಿಬುದ್ಧಿಗಳಿದ್ದು, ಶುಭ ಲಾಭ ಎಂದು ಬರೆದಿರುವ ಚಿತ್ರವನ್ನು ಹಾಕಬೇಕು. ಸ್ವಸ್ತಿಕವನ್ನು ಗಣೇಶನ ಪ್ರತೀಕವೆಂದೂ, ಸಿದ್ಧಿ - ಬುದ್ಧಿಯರು ಆತನ ಪತ್ನಿಯರೆಂದೂ, ಶುಭ - ಲಾಭವನ್ನು ಆತನ ಮಕ್ಕಳೆಂದೂ ನಂಬಲಾಗಿದೆ. ಮುಖ್ಯ ದ್ವಾರದ ಮೇಲೆ ಈ ಶುಭ ಚಿಹ್ನೆಗಳಿದ್ದರೆ ಕೆಟ್ಟ ಶಕ್ತಿಗಳು ಒಳಗೆ ಬರದಂತೆ ತಡೆ ಹಿಡಿಯಬಲ್ಲದು ಎಂದು ನಂಬಲಾಗಿದೆ. ಜನ್ಮ ಜಾತಕದ ಶುಕ್ರನಿದ್ದ ರಾಶಿಗೆ ಗೋಚರದ ಚಂದ್ರ ಬಂದಾಗ, ಸಾಲ ಮಾಡುವ ಪರಿಸ್ಥಿತಿ ಒದಗಬಹುದು, ಹಣದಿಂದ ನಿಷ್ಟೂರ, ಅನಾರೋಗ್ಯ, ಮೋಸಹೋಗುವ ಸನ್ನಿವೇಶ ಎದುರಾಗಬಹುದು, ಜನ್ಮ ಜಾತಕದ ಶುಕ್ರನಿದ್ದ ರಾಶಿಗೆ ಗೋಚರದ ಸೂರ್ಯ ಬಂದಾಗ ಹೆಂಡತಿಗೆ ಅನಾರೋಗ್ಯ, ಹಣಕಾಸಿನ ಮುಗ್ಗಟ್ಟು ವಾಸ್ತು :--- ********* ಬೆಡ್ರೂಮ್ನಲ್ಲಿ ಜಲತತ್ವ :--- ********************** ನೀರು ಒಂದು ಅಸ್ಥಿರ ತತ್ವ, ಆದ್ದರಿಂದಲೇ ನೀರಿನ ಸೆಲೆ ಬೆಡ್ರೂಮ್ನಲ್ಲಿ ದ್ದರೆ ಅಸ್ಥಿರತೆ ಉಂಟಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಬೆಡ್‌ರೂಮ್‌ನಲ್ಲಿ ಅಕ್ವೇರಿಯಂ ಇರಿಸುವುದನ್ನು ತಪ್ಪಿಸುವುದು ಒಳ್ಳೆಯದು. ಅಕ್ವೇರಿಯಂನಲ್ಲಿ ಈಜುತ್ತಿರುವ ಮೀನುಗಳನ್ನು ನೋಡುವುದರಿಂದ ಒತ್ತಡದಿಂದ ರಿಲೀಫ್ ದೊರೆತರೂ ಕೂಡ, ಅದನ್ನು ಬೆಡ್‌ರೂಮ್‌ನಲ್ಲಿ ಇರಿಸುವುದು, ದಂಪತಿಯ ನಡುವೆ ವಿರಸಕ್ಕೆ ಮೂಲವಾಗುತ್ತದೆ. ಬೆಡ್‌ರೂಮ್‌ನಲ್ಲಿ ನೀರಿನ ಪೋಸ್ಟರ್‌ಗಳನ್ನು ಸಹ ಇರಿಸಬಾರದು. ಜನ್ಮ ಜಾತಕದ ಗುರುವಿದ್ದ ರಾಶಿಗೆ ಗೋಚಾರದ ಗುರು ಬಂದಾಗ ಶುಭ, ಮನೆಯಲ್ಲಿ ಶುಭಕಾರ್ಯಗಳು, Name & fame ಎಲ್ಲಾ ಸಿಗುತ್ತೆ, ಪುತ್ರ ಸಂತಾನ ಯೋಗವುಂಟಾಗುತ್ತದೆ. ಡಾ : ಶೈಲಜಾ ರಮೇಶ್ ಜನ್ಮ ಜಾತಕದ ಗುರುವಿದ್ದ ರಾಶಿಗೆ ಗೋಚರದ ಕೇತು ಬಂದಾಗ, ಜಾತಕರಿಗೆ ಆಧ್ಯಾತ್ಮಿಕ ಬಾವ ಬರುತ್ತೆ, ಯಾವುದರಲ್ಲೂ ಆಸಕ್ತಿ ಇರಲ್ಲ, ವೈರಾಗ್ಯ ಭಾವ, ಗುರು ಶುಭ್ರತೆಯನ್ನು ಪ್ರತಿಬಿಂಬಿಸಿದ್ರೆ... ಕೇತು ಕೊಳಕನ್ನು ಪ್ರತಿಬಿಂಬಿಸ್ತಾನೆ.. ಹಾಗಾಗಿ ಆ ಸಮಯದಲ್ಲಿ ಜಾತಕರು ಕೊಳಕು ಬಟ್ಟೆಯನ್ನ ಧರಿಸ್ತಾರೆ ಮೋಕ್ಷ ಕಾರ್ಯ, ಸ್ವಜನರ ಭೇಟಿ, ನರ್ವಸ್ ಪ್ರಾಬ್ಲಮ್ ಬರುತ್ತೆ. ಬೆಡ್ರೂಮ್ ವಾಸ್ತು :--- ****************** ದಾಂಪತ್ಯ ಜೀವನ ಸುಖಮಯವಾಗಿರಲು ಪ್ರೀತಿ, ವಿಶ್ವಾಸದ ಜೊತೆ ಇಬ್ಬರ ನಡುವೆ ಹೊಂದಾಣಿಕೆ ಇರಲೇಬೇಕಾಗುತ್ತದೆ. ಆದರೆ ಇದರ ಜೊತೆಗೆ ಕೆಲವೊಂದು ವಾಸ್ತು ಟಿಪ್ಸ್ಗಳನ್ನು ಪಾಲಿಸಿದರೆ ವೈವಾಹಿಕ ಜೀವನ ಹೆಚ್ಚು ಸಂತೋಷವಾಗಿರಲು ಸಾಧ್ಯವಾಗುತ್ತದೆ. 1, ಬೆಡ್‌‌ರೂಮ್‌ನಲ್ಲಿ ರಾಧಾ ಕೃಷ್ಣರ ಫೋಟೊವನ್ನು ಇಡಿ. ಇದರಿಂದ ಪ್ರೀತಿ ಹೆಚ್ಚಾಗುತ್ತದೆ. 2, ದಂಪತಿಗಳು ತಮ್ಮ ಬೆಡ್‌‌ರೂಮ್‌ನಲ್ಲಿ ಪ್ರತ್ಯೇಕವಾಗಿ ಎರಡು ಸುಂದರ ಹೂದಾನಿ ಇಡಿ. 3, ಪ್ರೀತಿಯ ಸಂಕೇತ ಬೀರುವ ಲವ್‌ಬರ್ಡ್ಸ್‌‌ಗಳ ಫೋಟೊವನ್ನು ಬೆಡ್‌’‌ರೂಮ್‌ನಲ್ಲಿಡಿ. 4, ದಂಪತಿಗಳ ನಡುವೆ ಪ್ರೀತಿ ‌ ಹೆಚ್ಚಲು ಬೆಡ್‌‌ರೂಮ್‌ನಲ್ಲಿ ಹೃದಯ ಆಕಾರದ ಯಾವುದಾದರು ವಸ್ತುವನ್ನು ಇಡಿ. 5, ಗುಲಾಬಿ ಬಣ್ಣ ಪ್ರೀತಿಯ ಸಂಕೇತವಾಗಿದೆ. ಬೆಡ್ ರೂಮ್ ಬಣ್ಣ ಈ ಬಣ್ಣದಲ್ಲಿದ್ದರೆ ಉತ್ತಮ. 6, ಬೆಡ್ ರೂಮಿನಲ್ಲಿ ಕೆಂಪು ಬಣ್ಣದ ಗೂಲಾಬಿ ಹೂವು ಇಟ್ಟರೆ ಉತ್ತಮ. ವಾಸ್ತು :-- ಮಲಗುವ ಕೋಣೆಯಲ್ಲಿ ಕನ್ನಡಿಯನ್ನು ಇರಿಸಬಾರದು, ಇದರಿಂದ ದಂಪತಿಗಳಲ್ಲಿ ಮನಸ್ಥಾಪಕ್ಕೆ ಕಾರಣವಾಗುತ್ತದೆ. ಇಡಲೇ ಬೇಕಾಗಿ ಬಂದಲ್ಲಿ, ಮಲಗಿದ್ದಾಗ ನಿಮ್ಮ ನೆರಳು ಕನ್ನಡಿಯ ಮೇಲೆ ಬೀಳದಂತಹ ಜಾಗದಲ್ಲಿರಿಸಿ. ಜನ್ಮ ಜಾತಕದ ಗುರುವಿದ್ದ ರಾಶಿಗೆ ಗೋಚರದ ರಾಹು ಬಂದಾಗ, ಜೀವ ಭಯ, ಭ್ರಮೆ, ಅನಾರೋಗ್ಯ, ಮನಕ್ಕೆ ಮಂಕುಕವಿದಂತೆ ಕಾಣುವುದು, ಧನುರ್ವಾಯು ಹಾಗೂ ಶ್ರಮ. ವಾಸ್ತು :-- ಬೆಡ್ ರೂಮ್ನಲ್ಲಿ ದುಃಖವನ್ನು ಪ್ರದರ್ಶಿಸುವ, ಯುದ್ಧದ ಚಿತ್ರ, ಕಾಡುಮೃಗಗಳ , ಒಂಟಿ ಪ್ರಾಣಿಯ, ಪಕ್ಷಿಯ ಚಿತ್ರಗಳನ್ನು ಹಾಕಬಾರದು. ಜನ್ಮ ಜಾತಕದ ಗುರುವಿದ್ದ ರಾಶಿಗೆ ಗೋಚರದ ಶನಿ ಬಂದಾಗ ಗೌರವ, ಅಧಿಕಾರಲಾಭ, ಗಣ್ಯರ ಜೊತೆ ಕೆಲಸಮಾಡುವ ಯೋಗ, ಕೆಲಸದಲ್ಲಿ ಬದಲಾವಣೆ, ಪ್ರೊಮೋಷನ್ ಸಿಗುವ ಯೋಗ, ಗ್ಯಾಸ್ಟ್ರಿಕ್ ಬರುವ ಸಾಧ್ಯತೆ. ವಾಸ್ತು :- ಬೆಡ್ರೂಮ್ ನಲ್ಲಿ ಬೆಡ್ ನ ಹಿಂದಕ್ಕೆ ಬಲಿಷ್ಠವಾದ ಗೋಡೆಯಿರಬೇಕು, ಬೆಡ್ ನ ಹಿಂಬಾಗ ಕಿಟಕಿಯಿದ್ದರೆ ಅಸ್ಥಿರತೆ ಉಂಟಾಗುತ್ತದೆ. ಟಾಯ್ಲೆಟ್ ಗೋಡೆಗೇ ಬೆಡ್ ಹೊಂದಿಕೊಂಡಿದ್ದರೆ ನಕಾರಾತ್ಮಕ ಶಕ್ತಿ ಪ್ರವಹಿಸುತ್ತದೆ. ಜನ್ಮ ಜಾತಕದ ಗುರುವಿದ್ದ ರಾಶಿಗೆ ಗೋಚರದ ಶುಕ್ರ ಬಂದಾಗ, ದೈವಿಕ ಕಾರ್ಯಾನುಕೂಲ, ಸೌಂದರ್ಯ ವಸ್ತುಗಳ ಲಾಭ, ಉತ್ತಮ ರೀತಿಯಿಂದ ಧನ-ದ್ರವ್ಯಲಾಭ, ಶ್ರೀಮತಿಗೆ ಗುರುದರ್ಶನದ ಯೋಗವುಂಟಾಗುತ್ತದೆ ವಾಸ್ತು :-- ಉತ್ತರ ದಿಕ್ಕಿನಲ್ಲಿ ಉತ್ಪನ್ನವಾಗುವ ಎಲೆಕ್ಟೋ ಮ್ಯಾಗ್ನೆಟಿಕ್ ವೇವ್ಸ್ ( ವಿದ್ಯುತ್ ಆಯಸ್ಕಾಂತೀಯ ತರಂಗಗಳು) ಉತ್ತರದಿಂದ ದಕ್ಷಿಣದ ದಿಕ್ಕಿನತ್ತ ಚಲಿಸುತ್ತವೆ, ನಾವು ಮಲಗುವ ವೇಳೆ ಉತ್ತರ ದಿಕ್ಕಿನತ್ತ ತಲೆ ಇಟ್ಟು ಮಲಗಿದಾಗ ವಿದ್ಯುತ್ ಅಯಸ್ಕಾಂತೀಯ ತರಂಗಗಳ ಕಾರಣದಿಂದ ಸಮಸ್ಯೆ ಉಂಟಾಗುತ್ತದೆ, ತಲೆ ಹಾಗೂ ದೇಹದಲ್ಲಿ ನೋವು ಕಾಣಿಸಿಕೊಳ್ಳಬಹುದು, ಹಾಗಾಗಿ ಉತ್ತರದ ದಿಕ್ಕಿನತ್ತ ತಲೆ ಇಟ್ಟು ಮಲಗುವುದು ಬೇಡ. ದಕ್ಷಿಣದ ದಿಕ್ಕಿನತ್ತ ತಲೆ ಇಟ್ಟು ಮಲಗುವುದರಿಂದ ಆರಾಮದಾಯಕ ನಿದ್ರೆ ಬರುತ್ತದೆ. ಕೋಣೆಯ ಬಾಗಿಲಿನತ್ತ ಕಾಲನ್ನು.ಹಾಕಿ ಮಲಗುವುದೂ ಕೂಡ ಅಶುಭ, ಇದರಿಂದ ಯಾವಾಗಲೂ ಅನಾರೋಗ್ಯಕರ ಸಮಸ್ಯೆ ಗಳು ಉಂಟಾಗುತ್ತದೆ. ಜನ್ಮ ಜಾತಕದ ಗುರುವಿದ್ದ ರಾಶಿಗೆ ಗೋಚರದ ಬುಧ ಬಂದಾಗ, ಜಾತಕರಿಗೆ ಆಧ್ಯಾತ್ಮಿಕ ಮನಸ್ಸು ,ಹೊಸ ಅನುಭವ,ಬುದ್ಧಿ - ಜ್ಞಾನದ ಮಿಳಿತದಿಂದ ವಿವೇಕೋದಯ, ಗಣ್ಯವ್ಯಕ್ತಿಗಳನ್ನು ಭೇಟಿಯಾಗುವ ಯೋಗ, ಯುವಕರಿಗೆ ಅಭಿವೃದ್ಧಿ, ಸ್ತ್ರೀ ಜಾತಕವಾದರೆ ಪತಿಗಿಂತಲೂ ಬೇರೆಯವರು ಇಷ್ಟಆಗ್ತಾರೆ. ವಾಸ್ತು :-- ಅವಿಭಕ್ತ ಕುಟುಂಬವಾಗಿ ಮನೆಯಲ್ಲಿ ಅನ್ಯೋನ್ಯತೆ ಇದ್ದು ಸುಖ ಸಂಸಾರವಾಗಿದ್ದಾಗ ನವ ವಿವಾಹಿತರನ್ನು ನೈಋತ್ಯ ( ದಕ್ಷಿಣ - ಪಶ್ಚಿಮ) ದಿಕ್ಕಿನಲ್ಲಿರುವ ಬೆಡ್ ರೂಮ್ ನಲ್ಲಿ ಮಲಗಲು ಬಿಡಬಾರದು, ಏಕೆಂದ್ರೆ ಅವರುಗಳಲ್ಲಿ ನಾವೇ ಮನೆಯ ಅಧಿಪತಿಯಾಗಬೇಕೆಂಬ ಭಾವನೆ ಮೂಡಿ ಮತಬೇಧ ಉಂಟಾಗಲು ಕಾರಣವಾಗಬಲ್ಲದು. ಗರ್ಭಿಣಿ ಸ್ತ್ರೀಯರು ಉತ್ತರ - ಪೂರ್ವ ದಿಕ್ಕಿನಲ್ಲಿ ಮಲಗಬಾರದು, ಗರ್ಭಪಾತ ವಾಗುವ ಸಾಧ್ಯತೆ ಹೆಚ್ಚು. ಜನ್ಮ ಜಾತಕದ ಗುರುವಿದ್ದ ರಾಶಿಗೆ ಗೋಚರದ ಕುಜ ಬಂದಾಗ ರಕ್ತ ಸಂಬಂಧಿಗಳ ಭೇಟಿ, ಮಾಡುತ್ತಿರುವ ವೃತ್ತಿಯಲ್ಲಿ ಆಲಸ್ಯ, ಹಿತ ಶತ್ರುಗಳ ಕಾಟ, ಹಠದ ಸ್ವಭಾವ, ಬೆಂಕಿಯಿಂದ ತೊಂದರೆ, B P, ಪೈಲ್ಸ್ ಬರುವ ಸಾಧ್ಯತೆ. ಸ್ತ್ರೀ ಜಾತಕವಾದರೆ, ಪತಿಯ ನಡವಳಿಕೆಯಲ್ಲಿ ವ್ಯತ್ಯಾಸ, ಪತಿಗೆ ಸ್ಥಳ ಬದಲಾವಣೆಯಿಂದ ಶುಭ ಹಾಗೂ ಗೌರವ. ವಾಸ್ತು :--- ಮನೆಯೆಂದ ಮೇಲೆ ಲಿವಿಂಗ್ ರೂಮ್, ಡೈನಿಂಗ್ ಹಾಲ್, ಪೂಜಾ ಕೊಠಡಿ, ಅಡುಗೆ ಮನೆಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಮಹತ್ವ ಮಲಗುವ ಕೋಣೆಗೆ ಇದೆ. ಮಲಗುವ ಕೋಣೆಯಲ್ಲಿ ದಿನದ ಬಹಳ ಕಾಲವನ್ನು ಇಲ್ಲೇ ಕಳೆಯುತ್ತೇವೆ. ಯಾವಾಗಲೂ ಮಾಸ್ಟರ್ ಬೆಡ್ ರೂಂ ಅನ್ನು ದಕ್ಷಿಣ - ಪಶ್ಚಿಮದ ( ನೈಋತ್ಯ) ದಿಕ್ಕಿಗೇ ನಿರ್ಮಿಸಬೇಕು, ಮನೆಯ ಮಾಲೀಕನ ವಿಶ್ರಾಂತಿಗೆ ಈ ದಿಕ್ಕು ಎಲ್ಲದಿಕ್ಕಿಗಿಂತಲೂ ಅತೀ ಹೆಚ್ಚು ಆರಾಮದಾಯಕ ಹಾಗೂ ಶಕ್ತಿ ಶಾಲಿ ಪ್ರದೇಶವಾಗಿದೆ. ಜನ್ಮ ಜಾತಕದ ಗುರುವಿದ್ದ ಮನೆಗೆ ಗೋಚರದ ಚಂದ್ರ ಬಂದಾಗ, ಸಂಚಾರ, ಸ್ತ್ರೀಯರ ಭೇಟಿ, ಮೃಷ್ಟಾನ್ನ ಭೋಜನ ವಾಸ್ತು :--- ಡೈನಿಂಗ್ ಟೇಬಲ್ ಮೇಲೆ ಸದಾ ತಾಜಾ ಹಣ್ಣುಗಳನ್ನು ಇರಿಸಿ, ಡೈನಿಂಗ್ ಹಾಲ್ ನ ಉತ್ತರದ ಗೋಡೆಗೆ ಕನ್ನಡಿಯನ್ನು ಹಣ್ಣುಗಳು ಪ್ರತಿಬಿಂಬಿಸುವಂತೆ ಹಾಕಬೇಕು, ಡೈನಿಂಗ್ ಟೇಬಲ್ ಮೇಲೆ ಉಪ್ಪಿನಕಾಯಿ ಇರಿಸಬೇಡಿ. ಡೈನಿಂಗ್ ಟೇಬಲ್ ಮೇಲೆ ಕಟ್ಲರಿ ಗಳನ್ನಿಡಬಾರದು ಅದರಲ್ಲೂ ವಿಶೇಷವಾಗಿ ಚಾಕು , ಚೂರಿ, ಔಷಧಿ ಗಳನ್ನಿಡಬಾರದು. ಇವೆಲ್ಲಾ ನಕಾರಾತ್ಮಕ ವಾಗಿ ಕೆಲಸ ಮಾಡುತ್ತವೆ. ಜನ್ಮ ಜಾತಕದ ಗುರುವಿದ್ದ ರಾಶಿಗೆ ಗೋಚರದ ರವಿ ಬಂದಾಗ ವಿಶೇಷ ಗೌರವಾದರಗಳು, ಗಣ್ಯರ ಸಹಕಾರ, ರಾಜ ಸಮಾನರ ದರ್ಶನ ಹಾಗೂ ಸಹಾಯ ವಾಸ್ತು :-- ಉತ್ತರ ಹಾಗೂ ಪೂರ್ವ ದಿಕ್ಕಿನ ಗೋಡೆಗಳಿಗೆ ದೊಡ್ಡ ದೊಡ್ಡ ಗಾಜುಗಳನ್ನು ಹಾಕುವುದರಿಂದ ಆ ಗೋಡೆಗಳ ಪ್ರಭಾವ ಉತ್ತಮವಾಗಿರುತ್ತೆ, ಆ ಗೋಡೆಗಳನ್ನು ಅಲಂಕರಿಸಿದ್ದಲ್ಲಿ, ಆ ಮನೆಯಲ್ಲಿ ನೆಲೆಸಿರುವವರ ಆರೋಗ್ಯ ಉತ್ತಮವಾಗಿದ್ದು ಪ್ರಸನ್ನತೆಯಿಂದಿರುತ್ತಾರೆ. ಪೂರ್ವ ಅಥವಾ ಉತ್ತರ ದಿಕ್ಕಿಗೆ ಲಿವಿಂಗ್ ರೂಮ್ ಇದ್ದಲ್ಲಿ ಆ ಕೊಠಡಿಯ ಗೋಡೆಯ ಬಣ್ಣ ಬಿಳಿ ಅಥವಾ ತಿಳಿ ಹಸಿರು ಇದ್ದರೆ ಅತಿಥಿಗಳು ಮತ್ತು ನಿವಾಸಿಗಳ ಮಧ್ಯೆ ಸೌಹಾರ್ದ ಸಂಬಂಧ ಏರ್ಪಡುತ್ತದೆ. ಜನ್ಮ ಜಾತಕದ ಬುಧನಿದ್ದ ರಾಶಿಗೆ ಗೋಚರದ ಕೇತು ಬಂದಾಗ, ಮೋಕ್ಷ ವಿಷಯದ ಅನುಭವ, ಗ್ರಹಣ ಶಕ್ತಿಯಲ್ಲಿ ವ್ಯತ್ಯಾಸ, ಕಿರಿಯ ಸೋದರನಿಗೆ ದೋಷ ವಾಸ್ತು ಟಿಪ್ಸ್ :-- ಲಿವಿಂಗ್ ರೂಮ್ ಹಾಗೂ ಡೈನಿಂಗ್ ರೂಮ್ಗಳಲ್ಲಿ ಹೇರಳವಾಗಿ ಬೆಳಕು ಬೀಳುತ್ತಿರಬೇಕು, ಸ್ವಲ್ಪವೂ ಕತ್ತಲೆಯಿರಬಾರದು, ಈ ಭಾಗದ ಗೋಡೆಗಳಿಗೆ ಹಸಿರು ಬಣ್ಣವನ್ನು ಪ್ರಯೋಗಿಸಿ ನೋಡಿ. ಉತ್ತರ ಹಾಗೂ ಪೂರ್ವ ದಿಕ್ಕಿನ ಕಡೆಯ ಗೋಡೆಗಳತ್ತ ಹಗುರವಾದ ಫರ್ನಿಚರ್ ಗಳನ್ನಿರಿಸಿ, ಈ ಭಾಗದಲ್ಲಿ ಭಾರವನ್ನು ಹೇರಬಾರದು. ಜನ್ಮ ಜಾತಕದ ಬುಧನಿದ್ದ ರಾಶಿಗೆ ಗೋಚರದ ರಾಹು ಬಂದಾಗ, ಜಾತಕರು ಎಷ್ಟೇ ಬುದ್ಧಿವಂತ ರಾದಾಗ್ಯೂ, ಭ್ರಮೆ - ಭಯ ಇರುತ್ತದೆ, ಮಂಕುಹಿಡಿದಂತೆ ಇರುತ್ತಾರೆ, ಚರ್ಮವ್ಯಾಧಿ ಕೂಡ ಬರುತ್ತದೆ. ಜನ್ಮ ಜಾತಕದ ಕುಜ ಗ್ರಹದ ಮೇಲೆ ಗೋಚರದ ಗ್ರಹಗಳ ಪ್ರಭಾವ :---- ಜನ್ಮ ಜಾತಕದ ಕುಜನಿದ್ದ ರಾಶಿಗೆ ಗೋಚರದ ರವಿ ಬಂದಾಗ, ತಂದೆಗೆ ಸಹೋದರರಿಂದ ತಡೆ, ರಕ್ತದೋಷ ಉಂಟಾಗುತ್ತದೆ. ಜನ್ಮ ಜಾತಕದ ಕುಜನಿದ್ದ ರಾಶಿಗೆ ಗೋಚರದ ಚಂದ್ರ ಬಂದಾಗ.. ಬೇಸರ, ಅಶಾಂತಿ, ಸೋದರನಿಗೆ, ಪತ್ನಿಗೆ ಪ್ರಯಾಣ, ತಾಯಿಗೆ ಹಠ ಉಂಟಾಗುತ್ತದೆ. ಜನ್ಮ ಜಾತಕದ ಕುಜನಿದ್ದ ರಾಶಿಗೆ ಗೋಚರದ ಬುಧ ಬಂದಾಗ, ಮಿತ್ರರು ಹಾಗೂ ಬ್ರಾತೃಗಳೊಂದಿಗೆ ವಿವಾದ,ಸೋದರಮಾವ ನೊಂದಿಗೆ ವೈಮನಸ್ಯ, ಮೂಳೆ ಹಾಗೂ ಚರ್ಮದ ತೊಂದರೆಗಳುಂಟಾಗುತ್ತದೇ. ಜನ್ಮ ಜಾತಕದ ಕುಜನಿದ್ದ ರಾಶಿಗೆ ಗೋಚರದ ಗುರು ಬಂದಾಗ ಜಾತಕರಿಗೆ ನಾನೇ ಹೆಚ್ಚುಎಂಬ ಪ್ರತಿಷ್ಠೆಯ ಗುಣ,ಅಹಂ -ಆತುರ - ಹಠದಿಂದ ಆಪ್ತರನ್ನು ದೂರಮಾಡಿಕೊಳ್ಳುತ್ತಾರೆ. ಜನ್ಮ ಜಾತಕದ ಕುಜನಿದ್ದ ರಾಶಿಗೆ ಗೋಚರದ ಶುಕ್ರ ಬಂದಾಗ, ಜಾತಕನ ಸೋದರನಿಗೆ ದ್ರವ್ಯಲಾಭ, ಜಾತಕನ ದ್ರವ್ಯಲಾಭಕ್ಕೆ ಮಧ್ಯಸ್ಥಿಕೆ ಯಿಂದ ತಡೆ. ಜನ್ಮ ಜಾತಕದ ಕುಜನಿದ್ದ ರಾಶಿಗೆ ಗೋಚರದ ಶನಿ ಬಂದಾಗ,ಅಥವಾ ತ್ರಿಕೋಣ ದಲ್ಲಿದ್ದಾಗ, ಜಾತಕರಿಗೆ ವೃತ್ತಿಯಲ್ಲಿ ಕಿರುಕುಳ, ಅಶಾಂತಿ, ಜಗಳ.ಸ್ತ್ರೀ ಜಾತಕವಾದರೆ,ಆಕೆಗೂ ಆಕೆಯ ಪತಿಗೂ ಇದೇ ರೀತಿಯ ತೊಂದರೆಗಳು. ಜನ್ಮ ಜಾತಕದ ಕುಜನಿದ್ದ ರಾಶಿಗೆ ಗೋಚರದ ರಾಹು ಬಂದಾಗ, ಜಾತಕನಿಗೆ ಶಸ್ತ್ರಗಳಿಂದ ತೊಂದರೆ, ರಕ್ತದೋಷ, ಕಂಟಕ. ಸೋದರನಿಗೆ ಕಷ್ಟ, ಸ್ರೀಜಾತಕವಾದರೆ ಪತಿಗೆ ಶತ್ರುಬಾಧೆ, ವಾಹನಗಳಿಂದ ತೊಂದರೆ. ಜನ್ಮ ಜಾತಕದ ಕುಜನಿದ್ದ ರಾಶಿಗೆ ಗೋಚರದ ಕೇತು ಬಂದಾಗ, ಜಾತಕನಿಗೆ ಶಕ್ತಿಹೀನತ್ವ, ಸೋದರನ ಬಂಧನ, ಸ್ರೀಜಾತಕ ವಾದ್ರೆ ಪತಿಗೆ ವೃತ್ತಿ ಯಲ್ಲಿ ಕಿರುಕುಳ. ""ಕುಜ,ಪತಿಕಾರಕ ಗ್ರಹ, ಸ್ತ್ರೀಯ ಜಾತಕದಲ್ಲಿ ಕುಜ ಉಚ್ಚತ್ವ ಹೊಂದಿದ್ದರೆ, ಆಕೆಗೆ ಸಿಗುವ ಪತಿಯು ಪ್ರಭಲನು, ಬಲಶಾಲಿ,ದುಡುಕು, ವಿವೇಚನೆಯಿಲ್ಲದೆ ಮುನ್ನುಗ್ಗುವ ಸ್ವಭಾವದವನಾಗಿರುತ್ತಾನೆ. ಸ್ತ್ರೀ ಜಾತಕದಲ್ಲಿ ಕುಜನು ನೀಚನಾಗಿದ್ದರೆ, ಆಕೆಯ ಪತಿಯು ನೀಚನು, ದುರ್ವ್ಯವಹಾರವುಳ್ಳವನೂ ಆಗಿರುತ್ತಾನೆ."" ಜನ್ಮ ಜಾತಕದ ಚಂದ್ರನ ಮೇಲೆ ಗೋಚರದ ಗ್ರಹಗಳ ಪ್ರಭಾವ :---- ಜನ್ಮ ಜಾತಕದ ಚಂದ್ರನಿದ್ದ ರಾಶಿಗೆ ಗೋಚರದ ರವಿ ಬಂದಾಗ, ತಂದೆಗೆ ಪ್ರಯಾಣ, ಹಾಗೂ ತಂದೆಯು ತಾನಾಗಿ ನಿಂದನೆಗೆ ಒಳಗಾಗುವರು. ಜನ್ಮ ಜಾತಕದ ಚಂದ್ರನಿದ್ದ ರಾಶಿಗೆ ಗೋಚರದ ಕುಜ ಬಂದಾಗ ಜಾತಕರಿಗೆ ಚಂಚಲತೆ ಹಾಗೂ ಆತುರತೆ, ಮಾತೆಗೆ ಅನಾರೋಗ್ಯ, ಬ್ರಾತೃ ವಿಗೆ ಸಂಚಾರ ಜನ್ಮ ಜಾತಕದ ಚಂದ್ರನಿದ್ದ ರಾಶಿಗೆ ಗೋಚರದ ಬುಧ ಬಂದಾಗ, ಜಾತಕನಿಗೆ ಅಪವಾದ, ಸ್ತ್ರೀಯರಿಂದ ಬೇಸರ, ಕಲಾವಿಷಯಾಸಕ್ತಿ ಉಂಟಾಗುತ್ತದೆ. ಜನ್ಮ ಜಾತಕದ ಚಂದ್ರನಿದ್ದ ರಾಶಿಗೆ ಗೋಚರದ ಗುರು ಬಂದಾಗ, ಸ್ಥಳಬದಲಾವಣಾ ಯೋಗ, ಮಾತೃವಿಗೆ ದೈವಚಿಂತನೆ, ಕಫದಿಂದ ಅನಾರೋಗ್ಯ ಉಂಟಾಗುತ್ತದೇ. ಜನ್ಮ ಜಾತಕದ ಚಂದ್ರನಿರುವ ರಾಶಿಗೆ ಗೋಚರದ ಶುಕ್ರ ಬಂದಾಗ,ಪತ್ನಿ ಅಥವಾ ಮಗಳಿಗೆ ಅನಾರೋಗ್ಯ, ಮನೆಯ ಸ್ತ್ರೀಯರ ಮಧ್ಯೆ ವೈಮನಸ್ಯ, ಅಶಾಂತಿಯ ವಾತಾವರಣ, ಹಣ ವ್ಯಯವಾಗುತ್ತದೆ. ಜನ್ಮ ಜಾತಕದ ಚಂದ್ರನಿದ್ದ ರಾಶಿಗೆ ಗೋಚರದ ಶನಿ ಬಂದಾಗ, ಮಾಡುತ್ತಿದ್ದ ವೃತ್ತಿಯಲ್ಲಿ ಬದಲಾವಣೆ ಹಾಗೂ ಅವಹೇಳನಕ್ಕೆ ಗುರಿಯಾಗುವ ಸಂಭವ. ಜನ್ಮ ಜಾತಕದ ಚಂದ್ರನಿದ್ದ ರಾಶಿಗೆ ಗೋಚರದ ರಾಹು ಬಂದಾಗ ಮಾತೃವಿಗೆ ಅರಿಷ್ಠ, ಜಾತಕರಿಗೆ ಭಯ ಭೀತಿಯ ವಾತಾವರಣ. ಜನ್ಮ ಜಾತಕದ ಚಂದ್ರನಿದ್ದ ರಾಶಿಗೆ ಗೋಚರದ ಕೇತು ಬಂದಾಗ, ಮೋಕ್ಷ ಚಿಂತನೆ,ಪುಣ್ಯ ತೀರ್ಥಸ್ನಾನ, ಮಾತೃವಿಗೆ ಅನಾರೋಗ್ಯ. ವಾಸ್ತುಶಾಸ್ತ್ರ ದ ಪ್ರಕಾರ ಮುಖ್ಯದ್ವಾರ ನಿರ್ಣಯ **************************************** ದಕ್ಷಿಣ ಆಗ್ನೇಯ ದಿಕ್ಕು ******************* ಈ ದಿಕ್ಕಿಗೆ ಅಧಿಪತಿ ಶುಕ್ರ, ದಿಕ್ಪಾಲಕ ಅಗ್ನಿ, ದಕ್ಷಿಣ ಆಗ್ನೇಯ ದಿಕ್ಕಿಗೆ ಕುಜ ಶುಕ್ರರ ಸಂಬಂಧ ಉಂಟಾಗುತ್ತದೆ ( ದಕ್ಷಿಣದ ದಿಕ್ಕಿಗೆ ಕುಜ ಅಧಿಪತಿ ) , ಕುಜ ಶುಕ್ರರು ಸಮಗ್ರಹರು, ದಂಪತಿಗಳಲ್ಲಿ ಅನ್ಯೋನ್ಯತೆ, ಪರಸ್ಪರರಲ್ಲಿ ಪ್ರೀತಿಯನ್ನೂ ಸೌಹಾರ್ದತೆ ಯನ್ನೂ ಸೂಚಿಸುವ ಗ್ರಹಗಳು ಕುಜ ಶುಕ್ರರು, ಹಾಗಾಗಿ ದಕ್ಷಿಣಾಜ್ಞೆಯದಲ್ಲಿ ಮುಖ್ಯದ್ವಾರ ಸ್ಥಾಪಿಸಬಹುದು. ಈ ದಿಕ್ಕಿನಲ್ಲಿ ಯಾವುದೇ ರೀತಿಯ ತಗ್ಗು, ಹಳ್ಳ ಭಾವಿ, ನೀರಿನ ಸಂಪು ಮುಂತಾದುವಿದ್ದರೆ ದೋಷವಾಗಿ ಪರಿಣಮಿಸುತ್ತದೆ, ಆಗ ದಂಪತಿ ಗಳಲ್ಲಿ ಅನ್ಯೋನ್ಯತೆ ಗೆ ಧಕ್ಕೆ ಬರುತ್ತದೆ, ಮನೆಯ ಸ್ತ್ರೀಯರ ಆರೋಗ್ಯ ಕೆಡುತ್ತದೆ. ಜನ್ಮ ಜಾತಕದ ಗ್ರಹಗಳ ಮೇಲೆ ಗೋಚರದ ಗ್ರಹಗಳ ಪ್ರಭಾವ :---- ಜನ್ಮ ಜಾತಕದ ರವಿ ಇದ್ದ ಮನೆಗೆ ಗೋಚರದ ಚಂದ್ರ ಬಂದಾಗ ತಂದೆಗೆ ಸಂಚಾರಯೋಗ, ಪ್ರಯಾಣ, ವಿಷಯ ಲಾಭವಿರುತ್ತದೆ. ಜನ್ಮ ಜಾತಕದ ರವಿ ಇದ್ದ ಮನೆಗೆ ಗೋಚರದ ಕುಜ ಸಂಚಾರ ಕಾಲದಲ್ಲಿ ವ್ಯಕ್ತಿಗೆ ಉದ್ವೇಗ, ವೃತ್ತಿಗೆ ಶತ್ರುಗಳಿಂದ ಶ್ರಮ, ಕಿರುಕಳ, ತಂದೆಗೆ ಹಿತಶತ್ರುಗಳಿಂದ ತೊಂದ್ರೆ, ಮಗನಿಗೆ ಆಯುಧಗಳಿಂದ ಗಾಯ. ಜನ್ಮ ಜಾತಕದ ರವಿ ಇದ್ದ ಮನೆಗೆ ಗೋಚರದ ಬುಧ ಬಂದಾಗ ತಂದೆಗೆ ಮಿತ್ರರಿಂದ ಸಹಾಯ, ಭೂ ಅಭಿವೃದ್ಧಿಯಾಗುತ್ತದೆ. ಜನ್ಮ ಜಾತಕದ ರವಿ ಇದ್ದ ಮನೆಗೆ ಗೋಚರದ ಗುರು ಬಂದಾಗ ತಂದೆಗೆ ಗುರುಗಳ ಭೇಟಿ, ಆಪ್ತ ಮಿತ್ರರು ಹಾಗೂ ಗಣ್ಯರ ಸಹಕಾರ ಸಿಗುತ್ತದೆ. ಜನ್ಮ ಜಾತಕದ ರವಿ ಇದ್ದ ಮನೆಗೆ ಗೋಚರದ ಶುಕ್ರ ಬಂದಾಗ ಪಿತೃವಿಗೆ ಸುಂದರ ವಸ್ತುಗಳ ಲಾಭ, ದ್ರವ್ಯಲಾಭ ಹಾಗೂ ಸ್ತ್ರೀಯರ ಭೇಟಿಯಾಗುತ್ತದೆ. ಜನ್ಮ ಜಾತಕದ ರವಿ ಇದ್ದ ರಾಶಿಗೆ ಗೋಚರದ ಶನಿ ಬಂದಾಗ , ತಂದೆಗೆ ವೃತ್ತಿಯಲ್ಲಿ ಶ್ರಮ, ಬೇಸರ ಉಂಟಾಗುತ್ತದೆ, ತಂದೆ ಮಕ್ಕಳಲ್ಲಿ ಮನಸ್ತಾಪಗಳು ಉಂಟಾಗುತ್ತದೆ. ಜನ್ಮ ಜಾತಕದ ರವಿ ಇದ್ದ ಮನೆಗೆ ಗೋಚರದ ರಾಹು ಬಂದಾಗ ಪಿತೃವು ತೇಜೋರಹಿತರಾಗಿರುತ್ತಾರೆ, ಸೋಮಾರಿತನ, ಕೆಟ್ಟಸಮಾಚಾರವನ್ನು ಕೇಳುವ ಯೋಗ. ಜನ್ಮ ಜಾತಕದ ರವಿ ಇದ್ದ ಮನಗೆ ಗೋಚರದ ಕೇತು ಬಂದಾಗ ತಂದೆಗೆ ಸಂತರ ಭೇಟಿ, ವೈರಾಗ್ಯ ಹಾಗೂ ಮೋಕ್ಷ ಚಿಂತನೆ ಮೂಡುತ್ತೆ. ವಾಸ್ತು ಶಾಸ್ತ್ರದ ಪ್ರಕಾರ ಮುಖ್ಯದ್ವಾರ ನಿರ್ಣಯ :-- ******************************************* ಪೂರ್ವ ಆಗ್ನೇಯ ದಿಕ್ಕು :--- * *********************** ಆಗ್ನೇಯ ದಿಕ್ಕಿನ ಆಧಿಪತಿ ಶುಕ್ರ, ದಿಕ್ಪಾಲಕ ಅಗ್ನಿ, ಪೂರ್ವ ಆಗ್ನೇಯ ಕ್ಕೆ ಮುಖ್ಯದ್ವಾರ ಉತ್ತಮವಲ್ಲ, ಕಾರಣ ಪೂರ್ವ ಆಗ್ನೇಯಕ್ಕೆ ರವಿ ಶುಕ್ರರ ಸಂಬಂಧ ಉಂಟಾಗುತ್ತದೆ, ಇವರಿಬ್ಬರೂ ಪರಮ ವೈರಿಗಳು, ಈ ದಿಕ್ಕಿನಲ್ಲಿ ಶುಕ್ರನು ಉಚ್ಚತ್ವವನ್ನು ಪಡೆದು ಸೂರ್ಯನು ನೀಚನಾಗುತ್ತಾನೆ, ಶುಕ್ರನು ಉಚ್ಚನಾಗುವ ಕಾರಣ ಮನೆಗೆ ಸ್ತ್ರೀ ಪ್ರಾಭಲ್ಯ ಹೆಚ್ಚಾಗಿ ಮನೆಯ ಯಜಮಾನನು ಬಲಹೀನನಾಗುತ್ತಾನೆ, ಹಾಗೂ ತೊಂದರೆಗೆ ಒಳಗಾಗುತ್ತಾನೆ, ಆದ್ದರಿಂದ ಪೂರ್ವಾಜ್ಞೆಯದ ಮುಖ್ಯದ್ವಾರ ಉತ್ತಮವಲ್ಲ ನಿಷಿದ್ಧ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ವಾಸ್ತು ಶಾಸ್ತ್ರ ದ ಪ್ರಕಾರ ಮುಖ್ಯದ್ವಾರ ನಿರ್ಣಯ :--- ವಾಸ್ತುಶಾಸ್ತ್ರವು ವೇದ ವಿಜ್ಞಾನದ ಒಂದು ಅವಿಭಾಜ್ಯ ಅಂಗ. ಪಂಚಭೂತ ಶಕ್ತಿಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ, ಮಾನವ ಕಲ್ಯಾಣಕ್ಕೆ ಈ ಶಕ್ತಿಗಳನ್ನು ಹೇಗೆ ಸದುಪಯೋಗ ಪಡಿಸಿ ಕೊಳ್ಳಬಹುದು ಎಂಬುದನ್ನು ವಾಸ್ತು ವಿಜ್ಞಾನ ತಿಳಿಸುತ್ತದೆ. ಸಾಮಾನ್ಯವಾಗಿ ಮನೆ ನಿರ್ಮಾಣ ಮಾಡುವಾಗ ಮುಖ್ಯದ್ವಾರವನ್ನು ಯಾವ ದಿಕ್ಕಿಗೆ ಸ್ಥಾಪಿಸಿದರೆ ಸೂಕ್ತ, ಆ ದಿಕ್ಕಿನ ಫಲಾಫಲಗಳೇನು ಎಂಬ ಆಲೋಚನೆ ಮೂಡುವುದು ಸಹಜ. ಪೂರ್ವದ ದಿಕ್ಕು ಹಾಗೂ ಉತ್ತರದ ದಿಕ್ಕು ಮುಖ್ಯದ್ವಾರ ನಿರ್ಮಾಣಕ್ಕೆ ಅತ್ಯಂತ ಸೂಕ್ತ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ, ಆದರೆ ಇನ್ನುಳಿದ ದಿಕ್ಕುಗಳಲ್ಲಿ ಬಾಗಿಲಿಡ ಬೇಕಾದ ಸಂದರ್ಭ ಬಂದಲ್ಲಿ ಅದರ ಫಲಾಫಲಗಳೇನು ಎಂಬುವುದನ್ನು ಅರಿಯುವುದು ಸೂಕ್ತ. ಯಾವ ಯಾವ.ದಿಕ್ಕಿನಲ್ಲಿ ಮುಖ್ಯದ್ವಾರ ವಿದ್ದರೆ ಯಾವ ರೀತಿಯ ಫಲಗಳು ಎಂಬುದನ್ನು ತಿಳಿಯೋಣ. ಪೂರ್ವದಿಕ್ಕು :--- ಪೂರ್ವ ದಿಕ್ಕಿಗೆ ಅಧಿಪತಿ ಸೂರ್ಯ, ಸೌರವ್ಯೂಹದ ಕೇಂದ್ರ ಬಿಂದುವೇ ಸೂರ್ಯ. ಸೂರ್ಯ ಅಗಾಧ ಶಕ್ತಿಯ ಕಣಜ ಎಂಬ ಅಂಶವನ್ನು ವಾಸ್ತು ತಜ್ಞರು ಸಹಸ್ರಾರು ವರ್ಷಗಳ ಹಿಂದೆಯೇ ಹೇಳಿದ್ದಾರೆ. ಸೂರ್ಯನಲ್ಲಿರುವ ಸಪ್ತವರ್ಣಗಳು ಹಾಗೂ ಸೂರ್ಯ ಕಿರಣಗಳು ಹೊರಸೂಸುವ ಅತಿ ನೇರಳೆ ಕಿರಣಗಳು, ಅವುಗಳಿಂದಾಗುವ ಒಳಿತು-ಕೆಡಕುಗಳು ಹಾಗೂ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವ ಬಗೆಯನ್ನು ವಾಸ್ತು ವಿಜ್ಞಾನ ಬಹಳ ಹಿಂದೆಯೇ ತಿಳಿಸಿದೆ. ಆದ್ದರಿಂದಲೇ ವಾಸ್ತು ಪೂರ್ವ ದಿಕ್ಕಿಗೆ ಎಲ್ಲಿಲ್ಲದ ಪ್ರಾಮುಖ್ಯತೆ ನೀಡಿದೆ. ಪೂರ್ವ ದಿಕ್ಕು ಹಾಗೂ ಸೂರ್ಯನ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರತಿಯೊಬ್ಬರು ಹೇಗೆ ಪ್ರಯೋಜನವನ್ನು ಪಡೆಯಬಹುದು ಎಂಬುದನ್ನು ತಿಳಿಯೋಣ. ಪೂರ್ವ ದಿಕ್ಕಿಗೆ ರವಿಯ ಉಚ್ಚಸ್ಥಾನವಾದ ಮಧ್ಯದಲ್ಲಿ ಮುಖ್ಯದ್ವಾರ ಇಡುವುದರಿಂದ ಉತ್ತಮ ಮತ್ತು ಅನುಕೂಲ. ಪೂರ್ವದ್ವಾರದ ಮುಂಬಾಗದಲ್ಲಿ ಖಾಲಿ ಜಾಗ ಹೆಚ್ಚಿದ್ದು ತಗ್ಗಾಗಿದ್ದರೆ ಮನೆಯ ಯಜಮಾನನು ಆರೋಗ್ಯವಂತನೂ, ಎಲ್ಲಾ ಕಾರ್ಯಗಳಲ್ಲಿ ಯಶಸ್ಸು, ಅಭಿವೃದ್ಧಿ , ಉನ್ನತ ಪದವಿ, ನಾಯಕತ್ವ ಗುಣ, ಕೀರ್ತಿ ಗೌರವಗಳು ಲಭಿಸುತ್ತದೆ. ಅಕ್ಷಯ ತೃತೀಯ ಕುರಿತು ಶ್ರೀಮಾನ್ ರತ್ನರಾಜ್ ಜೈನ್ ರವರ ಅದ್ಭುತ ಲೇಖನ ಅಕ್ಷಯ ತೃತೀಯ ಉತ್ತಮ ದಿನವೇ? ======================+ ಬಹಳ ಜನ ನನಗೆ ದೂರವಾಣಿ ಕರೆ ಮಾಡಿ ಅಕ್ಷಯ ತೃತೀಯ ಈ ವರ್ಷ ಉತ್ತಮ ಅಲ್ಲ. ಕಾರಣ ಕೃತಿಕೆ ನಕ್ಷತ್ರ ಇದೆ ಎಂದರು. ಆದರೆ ಜ್ಯೋತಿಷ್ಯ ಆಧಾರದಲ್ಲಿ ಪರಿಶೀಲನೆ ಮಾಡಿದಾಗ ಖಂಡಿತ ಉತ್ತಮ ದಿನ. ವಿವರಣೆ ನೀಡುವೆನು. ಕೇಳಿ. ಕೃತಿಕೆ ನಕ್ಷತ್ರ ಬುಧವಾರ ಬಂದರೆ ಅಮೃತಸಿದ್ಧಿ ಯೋಗ. ಇದರ ಫಲದ೦ತೆ ಕೃಷಿ ವರ್ಗದವರಿಗೆ ಸಂತಸ ತರುವ ಕಾಲ. ಅಲ್ಲದೆ ಗುರುವಿನ ದೃಷ್ಟಿ ಮೇಷ ರಾಶಿಗೆ ಎಂದರೆ ಗಜಕೇಸರಿ ಯೋಗ. ಈ ದಿನ ಪಚ್ಚೆ ರತ್ನ (Green emerald) ಧರಿಸಲು ಉತ್ತಮ ದಿನ. ಗಜಕೇಸರಿ ಯೋಗ ಇದ್ದವರು ಈ ದಿನ ಕನಕಪುಷ್ಯರಾಗ ಜೊತೆಗೆ ಮುತ್ತು ರತ್ನ ಸೇರಿಸಿ ತೋರು ಬೆರಳು ಇದರಲ್ಲಿ ಧರಿಸುವುದು. ಕಾರಣ ಗುರು ದೃಷ್ಟಿಯಿಂದ ಶುಭ ದಿನ ಆಗಿದೆ. ಭರಣಿ ಹುಬ್ಬ ಮತ್ತು ಪೂರ್ವ ಆಷಾಢ ನಕ್ಷತ್ರ ದವರಿಗೆ ಸಂಪತ್ತು ತಾರೆ. ಧನ ಪ್ರಾಪ್ತಿ ಯೋಗ.ರೇವತೀ ಆಶ್ಲೇಷ ಮತ್ತು ಜ್ಯೇಷ್ಠ ನಕ್ಷತ್ರ ದವರಿಗೆ ಕ್ಷೇಮ ತಾರೆ ಯಲ್ಲಿ ಗಜಕೇಸರಿ ಯೋಗ. ಮನೆ ವಾಹನ ನಿವೇಶನ ಖರೀದಿ ಯೋಗ. ವಿವಾಹ ಭಾಗ್ಯ ಯೋಗ. ಪೂರ್ವ ಬಾದ್ರ ಪುನರ್ವಸು ಮತ್ತು ವಿಶಾಖಾ ದವರಿಗೆ ಸಾದಕ ತಾರೆ ಎಂದರೆ ಎನಿಸಿದ ಕಾರ್ಯ ಆಗುವುದು. ರಾಜಕಾರಣಿಗಳಿಗೆ ಅಧಿಕಾರ ಪ್ರಾಪ್ತಿ ಯೋಗ. ಹಾಗಾಗಿ ಈ ದಿನ ಮೇಲೆ ಸೂಚಿಸಿದ ಎಲ್ಲಾ ನಕ್ಷತ್ರ ದವರಿಗೆ ಶುಭೋದಯಕ. ಈ ದಿನ ಹಿಂದು ಧರ್ಮದ ಜನ ಆದರೆ ಈ ಮ೦ತ್ರ ಹೇಳಿ ಆಭರಣ ಧರಿಸಿ. ಓಂ ಹ್ರೀಂಶ್ರೀ ಸುಭ್ರಮಣ್ಯ ದೇವಾಯ ಆಭರಣ ಧಾರಣ೦ ಕರೋಮಿ ಸ್ವಾಹ ಎ೦ದು ಹೇಳಿ ಧರಿಸಿರಿ. ಕೃಷಿ ವರ್ಗ ದವರಿಗೆ ಈ ಮ೦ತ್ರ. ಓಂ ಹ್ರೀಂಶ್ರೀ ಸುಭ್ರಮಣ್ಯ ದೇವ ನಮಸ್ತುಭ್ಯಂ ವರದೇ ಕಾಮರೂಪಿಣಿ ಕೃಷಿ ಕಾರ್ಯಾರಂಭಂ ಕರಿಷ್ಯಾಮಿ ಸಿದ್ಧೀರ್ಭವತು ಮೇ ಸದಾ ಎಂದು ಹೇಳಿ. ಜೈನರು ಆದರೆ ಈ ಮ೦ತ್ರ ಪಠಣ ಮಾಡಿ. ಓಂ ಹ್ರೀಂಶ್ರೀ ಮೇಷ ಲಾ೦ಛನ ಸ್ಥಿತಃ ಶ್ರೀ ಕು೦ಥುನಾಥ ಸ್ವಾಮಿ ಜಿನೇ೦ದ್ರಾಯ ಹ್ರೀಂಶ್ರಿ ಗಂಧರ್ವ ಯಕ್ಷ ಜಯದೇವಿ ಯಕ್ಷಿಣಿ ಸಹಿತಾಯ ಮಮ ಶಾಂತಿಂ ಕುರು ಕುರು ಕಾಂತಿಂ ಕುರು ಕುರು ಪುಷ್ಟೀಂ ಕುರು ಕುರು ಸರ್ವ ವಿಘ್ನ ವಿನಾಶನಂ ಕುರು ಕುರು ಆಯುರಾರೋಗ್ಯ ಸ೦ಪತ್ ಕೀರ್ತಿ ಕುರು ಕುರು ಸ್ವಾಹ ಎಂದು ಹೇಳಿ ನಿಮ್ಮ ಕಾರ್ಯ ಮುಂದುವರಿಸಿ. ತರ್ಕ ಮಾಡುವವರು ಮಾತಾಡಿ ಸ್ವಾಗತ.... ರತ್ನರಾಜ ಜೈನ್ ಶ್ರೀಮುಖ ಬೆಂಗಳೂರು ೯೯೪೫೩ ೫೦೫೮೬

1 comment:

  1. ತುಂಬಾ ಉತ್ತಮ ವಾದ ವಿಷಯ ಗಳನ್ನು ನೀಡಿದ್ದೀರಿ
    ನಿಮಗೆ ಅನಂತ್ ಅನಂತ್ ಧನ್ಯವಾದಗಳು 🌺🌺🦚🦚🙏🙏🙏🙏🙏🌺🌺🦚🦚

    ReplyDelete